ಉದಯವಾಹಿನಿ, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ಮತ್ತು ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ ಆಯಂಡ್ ಇಂಪೋರ್ಟ್ ಲಿಮಿಟೆಡ್ನಿಂದ ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.ಬ್ಯಾಂಕ್ಗೆ ವಂಚನೆ ಪ್ರಕರಣ ಸಂಬಂಧ 2 ಜಿಲ್ಲೆಗಳಲ್ಲಿ ಏಳು ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ 100 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 14 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಹಲವು ದಾಖಲೆಗಳು ಹಾಗೂ ಡಿಜಿಟಲ್ ಡಿವೈಸ್ಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಖಾತೆಯನ್ನು ಜಪ್ತಿ ಮಾಡಿದ್ದಾರೆ.ಓಡಾ ಕ್ಲಾಸ್ ಆಯಪ್ ಮೂಲಕ ಆನ್ಲೈನ್ ಶಿಕ್ಷಣವನ್ನು ಒದಗಿಸುವ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಬೆಂಗಳೂರಿನ ಎರಡು ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು.ಇದೀಗ ಮತ್ತೊಂದು ಕಂಪನಿ ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ ಆಯಂಡ್ ಇಂಪೋರ್ಟ್ ಲಿಮಿಟೆಡ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನಗರದಲ್ಲಿ ಶೋಧ ನಡೆಸಿದೆ.
