ಉದಯವಾಹಿನಿ, ಕೆ.ಆರ್.ಪುರ: ಬುದ್ಧನು ಅಹಿಂಸೆಯ ಪ್ರತಿಪಾದಕನಾಗಿದ್ದ. ಆತನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದು ಬುದ್ಧ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ದೊಡ್ಡ ಬನಹಳ್ಳಿಯಲ್ಲಿ ಬುದ್ಧ ಭೂಮಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದೆ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದರು.
ಬುದ್ಧನ ಅಷ್ಟಾಂಗ ಮಾರ್ಗ ಮತ್ತು ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಅದರಂತೆ ನಡೆಯಬೇಕು. ಬುದ್ಧನ ತತ್ವಗಳು ಅಂಬೇಡ್ಕರ್ ಮತ್ತು ಬಸವಣ್ಣ ರವರ ಮೇಲೆ ಅಗಾಧ ಪ್ರಭಾವ ಬೀರಿತು. ಮಾನವನ ಘನತೆಯನ್ನು ಎತ್ತಿ ಹಿಡಿಯುವ ಧರ್ಮವೇ ನಿಜವಾದ ಧರ್ಮವಾಗಿದೆ ಎಂದು ಪ್ರತಿಪಾದಿಸಿದ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಭೌದ ಧರ್ಮವು ೨೬೦೦ ವರ್ಷಗಳ ಹಿಂದೆಯೇ ಪ್ರಚಲಿತದಲ್ಲಿದ್ದನ್ನು ಇತಿಹಾಸದಲ್ಲಿ ತಿಳಿಯಬಹುದಾಗಿದೆ. ಬುದ್ಧ ಹಾಗೂ ಧಮ್ಮದ ಬಗ್ಗೆ ಅಂಬೇಡ್ಕರ್ ಪ್ರಕಟಿಸಿರುವ ಪುಸ್ತಕವನ್ನು ಓದುವ ಮೂಲಕ ನಿಜವಾದ ಇತಿಹಾಸವನ್ನು ಅರಿಯಬೇಕೆಂದು ಹೇಳಿದರು. ಇದೇ ವೇಳೆ ಬುದ್ಧನ ಅನುಯಾಯಿಗಳು ಬುದ್ಧನ ಪ್ರತಿಮೆಗೆ ಮೇಣದಬತ್ತಿ, ಧೂಪದ್ರವ್ಯಗಳನ್ನು ಬೆಳಗಿಸಿ ಪ್ರಾರ್ಥಿಸಿದರು. ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಧರ್ಮೋಪದೇಶಗಳು ನಡೆದವು. ನಾಟಕ ಪ್ರದರ್ಶಿಸಿದರು. ಬುದ್ಧನ ಅನುಯಾಯಿಗಳಾದ ಬೆಳತ್ತೂರ್ ರಮೇಶ್, ಎ.ಎಸ್.ಐ ದೇವರಾಜ್, ಚಿನ್ನಸ್ವಾಮಿ, ಬೆನ್ನೆಗನಹಳ್ಳಿ ರಾಮಚಂದ್ರ,ವಿನೋದ, ಶಿವಪ್ಪ, ಬಿ.ಎಂ.ವೆಂಕಟೇಶ್, ವಿಜಯನ್, ಸುರೇಶ್, ನಾಗರಾಜ್, ವಿಕ್ರಮ್, ಮತ್ತಿತರರು ಇದ್ದರು.
