
ಉದಯವಾಹಿನಿ, ಔರಾದ್ : ಶಿಕ್ಷಕರು ಮಕ್ಕಳಿಗೆ ವಿದ್ಯೆ ನೀಡುವಲ್ಲಿ ವಿಫಲರಾದರೆ ಸಮಾಜವು ಎಲ್ಲ ರಂಗಳಲ್ಲಿಯೂ ಎಡವಿಕೊಳ್ಳುತ್ತದೆ. ಶಿಕ್ಷಕರು ಸಮಾಜದ ಅಭಿವೃದ್ಧಿಯ ಶಿಲ್ಪಿಗಳಾಗಿದ್ದಾರೆ ಎಂದು ಪೂಜ್ಯ ಶ್ರೀ ಮಹಾದೇವಮ್ಮ ತಾಯಿ ನುಡಿದರು.ಮಂಗಳವಾರ ಔರಾದ್ ಪಟ್ಟಣದ ಬಸವ ಮಂಟಪದಲ್ಲಿ ಪ್ರವಚನ ಸೇವಾ ಸಮಿತಿ ಆಯೋಜಿಸಿದ್ದ ಮಾಜಿ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದೇಶದ ಅಭಿವೃದ್ಧಿಗೆ ಶಿಕ್ಷಕರ ಕಾಣಿಕೆ ಮಹತ್ವದ್ದಾಗಿದ್ದು ಶಿಕ್ಷಕರಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಪ್ರಸ್ತುತ ಜೀವನ ಮೌಲ್ಯ ಹೊಂದಿರುವ ಶಿಕ್ಷಣದ ಅವಶ್ಯಕತೆ ಇದ್ದು, ಕತ್ತಲು ಆವರಿಸಿಕೊಂಡ ಸಮಾಜವನ್ನು ಜ್ಞಾನದ ಜ್ಯೋತಿಯಿಂದ ಪ್ರಜ್ವಲಿಸುವಂತೆ ಮಾಡುವ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ ಎಂದು ಕರೆ ನೀಡಿದರು.ಇದೆ ಸಂದರ್ಭದಲ್ಲಿ ನಿರ್ಮಲಾ ಶಾಂತಪ್ಪ ಘುಳೆ ಅವರ ಸ್ಮರಣಾರ್ಥ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸೂರ್ಯಕಾಂತ ಸಿಂಗೆ, ಇಂದಿರಾ ಕಾನ್ವೆಂಟ್ ಶಾಲೆ ಶಿಕ್ಷಕ ಧನರಾಜ ನಿಟ್ಟೂರೆ, ಯನಗುಂದಾ ಪ್ರೌಢಶಾಲೆ ಶಿಕ್ಷಕ ಅನೀಲಕುಮಾರ ಮಾಟೆ, ಜೋಜನಾ ಪ್ರಾಥಮಿಕ ಶಾಲೆಯ ಪ್ರದೀಪ ಗುಬನೂರೆ, ಬಸವ ಗುರುಕುಲ ಪ್ರೌಢಶಾಲೆಯ ವಾಮನ ಮಾನೆ, ಬಾದಲಗಾಂವ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರಭಾವತಿ ಭಾಲೇಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ವಚನ ನೃತ್ಯ ನೆರವೇರಿತು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಡಾ. ಧನರಾಜ ರಾಗಾ, ಶರಣಪ್ಪ ಚಿಟಮೆ, ಚಂದ್ರಕಾಂತ ಘುಳೆ, ಪ್ರಕಾಶ ಘುಳೆ, ಶರಣಪ್ಪ ನಾಗಲಗಿದ್ದಿ, ಅಡವೆಪ್ಪ ಪಟ್ನೆ, ಅಂಬಾದಾಸ ನಳಗೆ, ಮನ್ಮತಪ್ಪ ಹುಗ್ಗೆ, ಮಾಣಿಕಪ್ಪ ಗುಡೂರೆ, ಸುಭಾಶ ಸಿರಂಜೆ, ಕಲ್ಯಾಣರಾವ ಶೆಂಬೆಳ್ಳೆ, ಪ್ರಭು ಬಾಳೂರೆ, ಸೂರ್ಯಕಾಂತ ಘುಳೆ, ಮಹಾದೇವ ಘುಳೆ ಸೇರಿದಂತೆ ಇನ್ನಿತರರಿದ್ದರು.
