ಉದಯವಾಹಿನಿ, ಕಲಬುರಗಿ : ಸುರಿದ ಮಳೆ, ಗಾಳಿಗೆ ನಗರ ಹೊರವಲಯದ ಉದನೂರ ಗ್ರಾಮದ ಬಳಿ ನಿರ್ಮಿಸಲಾಗಿರುವ ತ್ಯಾಜ್ಯ ಸಂಸ್ಕರಣ ಘಟಕ ಮುರಿದು ಬಿದ್ದಿದೆ. ಘಟಕದ 10-12 ಪಿಲ್ಲರ್ಗಳು ಮುರಿದು ಬಿದ್ದಿವೆ ಎಂದು ತಿಳಿದುಬಂದಿದೆ. ನಗರದ ಕಸ ವಿಲೇವಾರಿಗಾಗಿ ಮಹಾನಗರ ಪಾಲಿಕೆ ವರ್ಷದ ಹಿಂದೆಯಷ್ಟೇ ಸುಮಾರು 16 ಕೋಟಿ ರೂ.ವೆಚ್ಚದಲ್ಲಿ ಈ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಮಾಡಿದೆ ಎಂಬ ಮಾಹಿತಿ ಇದೆ. ಒಂದೇ ಮಳೆ ಗಾಳಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತ್ಯಾಜ್ಯ ಸಂಸ್ಕರಣ ಘಟಕ ಕುಸಿದು ಬಿದ್ದಿದ್ದಾದರು ಹೇಗೆ ? ಈ ಬಗ್ಗೆ ತನಿಖೆ ನಡೆಸಬೇಕು, ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಅವರ ಲೈಸನ್ಸ್ ರದ್ದು ಪಡಿಸಬೇಕು ಎಂದು ದಲಿತ ಸೇನೆಯ ಮುಖಂಡ, ನ್ಯಾಯವಾದಿ ಹಣಮಂತ ಯಳಸಂಗಿ ಆಗ್ರಹಿಸಿದ್ದಾರೆ.
