ಉದಯವಾಹಿನಿ, ಬೆಂಗಳೂರು: ಮೈಸೂರು, ಕುಶಾಲನಗರ, ಬೆಂಗಳೂರು – ಸತ್ಯಮಂಗಲ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ಹಣಕಾಸು ಮುಗ್ಗಟ್ಟು ಕಾರಣದಿಂದ ರೆಡ್ ಸಿಗ್ನಲ್ ಕೊಟ್ಟಿದೆ. ಸರ್ಕಾರದ ನಡೆಗೆ ವಿಪಕ್ಷ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ಸಿಕ್ಕಸಿಕ್ಕವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಕೊಟ್ಟು ಮೆರೆಸಲು ದುಡ್ಡಿದೆ, ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರೆಂಟಿ ನೀಡುವ ಸಮಿತಿ ರಚಿಸಲು ದುಡ್ಡಿದೆ, ಶಾಸಕರಿಗೆ, ಮಂತ್ರಿಗಳಿಗೆ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರು ಖರೀದಿ ಮಾಡಲು ದುಡ್ಡಿದೆ, ಅಲ್ಪಸಂಖ್ಯಾತರಿಗೆ 10,000 ಕೋಟಿ ರೂ. ನೀಡಲು ದುಡ್ಡಿದೆ, ಹತ್ತಾರು ಕೋಟಿ ದುಂದುವೆಚ್ಚ ಮಾಡಿ ಸಾಧನಾ ಸಮಾವೇಶ ನಡೆಸಲು ದುಡ್ಡಿದೆ, ಆದರೆ ರೈಲ್ವೆ ಯೋಜನೆಗಳಿಗೆ ದುಡ್ಡಿಲ್ಲ. ಈ ಸರ್ಕಾರ ತೊಲಗುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಎಕ್ಸ್ನಲ್ಲಿ ಪೋಸ್ಟ್, ಹಂಚಿಕೆ ಸೂತ್ರದ ಅನ್ವಯ ರಾಜ್ಯದ ಪಾಲಿನ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಈ ಯೋಜನೆಗಳಿಗೆ ’ಹಣ ಹೊಂದಿಸಲು ಸಾಧ್ಯವಿಲ್ಲ’ ಎಂದು ರಾಜ್ಯ ಸರ್ಕಾರ ಕೈ ಚೆಲ್ಲಿದೆ. ರೈಲ್ವೆ ಯೋಜನೆಗಳನ್ನು ಹಳ್ಳ ಹಿಡಿಯುವಂತೆ ಮಾಡಿದೆ. ಕಾಂಗ್ರೆಸ್ ಆಡಳಿತ ಕರ್ನಾಟಕ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಅಧಿಕಾರದಲ್ಲಿ ಉಳಿಯುವುದೊಂದೇ ತಮ್ಮ ಧ್ಯೇಯ ಎಂಬಂತೆ ಭಂಡತನದಿಂದ ನಡೆದುಕೊಳ್ಳುತ್ತಿರುವ, ಪ್ರತಿ ಇಲಾಖೆಯಲ್ಲೂ ಲಂಚ ಹಾಗೂ ಕಮಿಷನ್ ದಂಧೆಗೆ ಕುಮ್ಮಕ್ಕು ನೀಡುತ್ತಿರುವ, ಅಭಿವೃದ್ಧಿಯ ಹಾದಿಯಲ್ಲಿ ತುಕ್ಕು ಹಿಡಿದು ಕುಳಿತಿರುವ ಈ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಕರ್ನಾಟಕ ಅಭಿವೃದ್ಧಿ ಆಗಲ್ಲ ಅಂತ ಕಿಡಿಕಾರಿದ್ದಾರೆ.
