
ಉದಯವಾಹಿನಿ, ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೋಲ್ ಮಾರ್ಗ ತಪ್ಪಿಸಿದ ವಿಚಾರವಾಗಿ ಕ್ಯಾಬ್ ಚಾಲಕ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 20 ರಂದು ಈ ಘಟನೆ ನಡೆದಿದೆ. ಆರೋಪಿಯನ್ನು ಕೇರಳದ ತ್ರಿಶೂರ್ ಮೂಲದ ಅಜಾಸ್ ಪಿ.ಎಸ್ (31) ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಹಲ್ಲೆಗೊಳಗಾದ ವಿದ್ಯಾರ್ಥಿನಿಯ ಚಿಕ್ಕಪ್ಪ ಈ ಬಗ್ಗೆ ದೂರು ನೀಡಿದ್ದಾರೆ, ಅವರ ದೂರಿನ ಪ್ರಕಾರ, ನಮ್ಮ ಮಗಳು ಪಶ್ಚಿಮ ಬಂಗಾಳದವಳಾಗಿದ್ದು, ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿ, ಆಕೆ ವಿಮಾನ ನಿಲ್ದಾಣಕ್ಕೆ ಬರಲು ಆನ್ಲೈನ್ ಅಗ್ರಿಗೇಟರ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್ ಡ್ರೈಬರ್ಗೆ ಟೋಲ್ ಹಣವನ್ನು ಕೂಡ ಮುಂಚಿತವಾಗಿ ಪೇ ಮಾಡಿದ್ದಾಳೆ. ಅದರೂ ಟೋಲ್ ತಪ್ಪಿಸಿದ್ದಾನೆ. ಈ ಬಗ್ಗೆ ಆಕೆ ಪ್ರಶ್ನಿಸಿದ್ದು, ಚಾಲಕ ಸರಿಯಾದ ವಿವರಣೆ ನೀಡಿಲ್ಲ ಎಂದು ಕೋಪಗೊಂಡ ವಿದ್ಯಾರ್ಥಿನಿ ಕಾರು ನಿಲ್ಲಿಸುವಂತೆ ಹೇಳಿದ್ದಾಳೆ ಎಂದು ಹೇಳಿದ್ದಾರೆ.
