ಉದಯವಾಹಿನಿ, ನವದೆಹಲಿ: ವಾಹನದಿಂದಾಗುವ ಮಾಲಿನ್ಯವನ್ನು ತಡೆಯಲು ದೆಹಲಿಯ ಗಡಿಗಳಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಬೇಕು, ಮಾಲಿನ್ಯದ ಮಟ್ಟಗಳು ಅಪಾಯಕಾರಿಯಾಗಿ ಹೆಚ್ಚಿರುವಾಗ ಟೋಲ್ಗಳ ಮೂಲಕ ಆದಾಯ ಗಳಿಕೆಗೆ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಸೂರ್ಯಕಾಂತ್ ಹೇಳಿದರು.
ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಇಂತಹ ತೀವ್ರ ಮಾಲಿನ್ಯದಲ್ಲಿ ನಾವು ಟೋಲ್ಗಳಿಂದ ಆದಾಯವನ್ನು ಬಯಸುವುದಿಲ್ಲ ಎಂದು ಸಿಜೆಐ ಟೀಕಿಸಿದರು. ಜ.31ರವರೆಗೆ ದೆಹಲಿಯ ಗಡಿಗಳಲ್ಲಿ ಯಾವುದೇ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಕಾಂಕ್ರೀಟ್ ಯೋಜನೆಯನ್ನು ರೂಪಿಸುವ ಉದ್ದೇಶವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ಮುಂದಿನ ವರ್ಷ ಅ.1ರಿಂದ ಜ.31ರವರೆಗೆ, ಅಂದರೆ ರಾಷ್ಟ್ರರಾಜಧಾನಿಯಲ್ಲಿ ಮಾಲಿನ್ಯವು ಗರಿಷ್ಠ ಮಟ್ಟಕ್ಕೆ ತಲುಪುವವರೆಗೆ ಟೋಲ್ ಸಂಗ್ರಹವನ್ನು ವಾರ್ಷಿಕವಾಗಿ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ. ಈ ವಿಷಯದಲ್ಲಿ ನೋಟಿಸ್ ನೀಡಬೇಕೆಂದು ಸಿಜೆಐ ನಿರ್ದೇಶಿಸಿದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರ ಹಾಜರಾದ ಹಿರಿಯ ವಕೀಲರು ನ್ಯಾಯಾಲಯದ ಸೂಚನೆಯನ್ನು ಸ್ವೀಕರಿಸಿದರು.
