
ಉದಯವಾಹಿನಿ ಶಿಡ್ಲಘಟ್ಟ: ನಗರದ 26 ನೇ ವಾರ್ಡಿನ ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ಖಾಲಿ ಬಿಂದಿಗೆಗಳನ್ನು ಹಿಡಿದು ನಗರ ಸಭೆ ಮುಂಭಾಗ ಮಹಿಳೆಯರು ಸೋಮವಾರ ಪ್ರತಿಭಟಿಸಿದರು.ಶಿಡ್ಲಘಟ್ಟ ನಗರದ ಆಶ್ರಯ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಕುಡಿಯಲು ನೀರಿನ ಆಹಾಕಾರವಾಗಿದೆ ಹಾಗೂ ಸ್ವಚ್ಛತೆ ಮರೀಚಿಕೆಯಾಗಿದೆ. ನಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಇಲ್ಲಿ ಹೆಚ್ಚಿನದಾಗಿ ರೇಷ್ಮೆ ಕೂಲಿ ಕಾರ್ಮಿಕರು ಇದ್ದು ತಿಂಗಳಿಗೊಮ್ಮೆ ನೀರು ಬಿಡುತ್ತಿದ್ದು ಈಗ ಅದು ಇಲ್ಲದಂತಾಗಿದೆ. ಇನ್ನು ಸ್ವಚ್ಛತೆ ವಿಚಾರವಾಗಿ ಹೇಳುವುದಾದರೆ ಇತ್ತೀಚೆಗೆ ಶಾಸಕರು ಏನು ಸ್ವಚ್ಛತೆ ಮಾಡಿಸಿದ್ದರೂ ಅದುವೇ ಹೊರತು ನಗರಸಭೆಯ ವಾಹನ ಬಂದೇ ಇಲ್ಲ ಎಂದರು.
ನಗರಸಭೆ ವತಿಯಿಂದ ಎರಡು ವರ್ಷದಿಂದ ಘನತಾಜ್ಯ ವಿಲೇವಾರಿ ಎಂದು ತೆರಿಗೆ ಹಾಕುತ್ತಿದ್ದಾರೆ ಇದನ್ನು ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳ ಆದೇಶ ಎನ್ನುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಸ್ವಚ್ಛತೆ ಮಾಡಿ ಅಂತ ಇವರಿಗೆ ಹೇಳುವುದಿಲ್ಲವೇ ಎಂದು ನಿವಾಸಿಗಳು ನಗರಸಭೆ ಅಧಿಕಾರಿಗಳು ವಿರುದ್ಧ ಗುಡುಗಿದರು.
ನಾನು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದು, ನಗರದಾದ್ಯಂತ ಏನೇನು ಸಮಸ್ಯೆ ಇದೆ ಎಂದು ಪಟ್ಟಿ ಮಾಡುತ್ತಿದ್ದೇನೆ ಎರಡು ಮೂರು ದಿನಗಳಲ್ಲಿ ಇವರ ಸಮಸ್ಯೆ ಏನಿದೆ ಅದನ್ನು ಬಗೆಹರಿಸುತ್ತೇನೆ. ತಕ್ಷಣದಿಂದಲೇ ಟ್ಯಾಂಕರ್ ನೀರನ್ನು ಸರಬರಾಜು ಮಾಡಲು ಕ್ರಮ ವಹಿಸುತ್ತೇನೆ ಮುಂದಿನ ದಿನಗಳಲ್ಲಿ ವಿಶೇಷ ಅನುದಾನದಲ್ಲಿ ಕೊಳವೆಬಾವಿ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
– ಆಂಜನೇಯಲು,ನಗರ ಸಭೆ ಪೌರಾಯುಕ್ತ
