ಉದಯವಾಹಿನಿ, ಹಾವೇರಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ರಾಮಮಂದಿರದ ಬಳಿ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಅವರ ಮಂದಿರವನ್ನು ನಿರ್ಮಿಸಬೇಕೆಂದು ಲೋಕೋಪಯೋಗಿ ಸಚಿನ ಸತೀಶ್ ಜಾರಕಿಹೊಳಿ ಅವರು ಆಗ್ರಹಿಸಿದ್ದಾರೆ.ಹಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅಯೋಧ್ಯೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಿರುವುದು ಸ್ವಾಗತಾರ್ಹ.ವಾಲ್ಮೀಕಿ ಅವರು ರಾಮಯಣವನ್ನು ರಚಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ನಿರ್ಮಾಣ ಮಾಡಿರುವುದು ಸಂತಸದ ವಿಚಾರದ. ಇದು ಕೋಟ್ಯಂತರ ಭಾರತೀಯರ ಕನಸಾಗಿತ್ತು. ಅದೇ ರೀತಿ ರಾಮಮಂದಿರ ಬಳಿ ವಾಲ್ಮೀಕಿ ಮಂದಿರವೂ ಆಗಲಿ ಎಂದು ಒತ್ತಾಯಿಸಿದರು. ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ರಾಮಮಂದಿರ ನಿರ್ಮಾಣ ಆಡಳಿತರೂಢ ಬಿಜೆಪಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಜಾರಕಿಹೊಳಿ, ದೇಶದ ಎಲ್ಲೆಡೆ ಕೋಟ್ಯಂತರ ದೇವಾಲಯಗಳಿವೆ. ಎಲ್ಲಾ ದೇವಾಲಯಗಳಂತೆ ರಾಮಮಂದಿರವೂ ಒಂದು. ಅದೇ ರೀತಿ ರಾಜಕೀಯವೂ ಕೂಡ ಎಲ್ಲಡೆ ಇದೆ. ರಾಮಮಂದಿರದಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಎಲ್ಲವೂ ಚುನಾವಣೆಯ ನಂತರ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿದ ಹಿಜಾಬ್ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ಹಿಜಾಬ್ ಸಂಬಂಧ ಸರ್ಕಾರ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಖಿಕವಾಗಿ ಹೇಳಿರಬಹುದು ಆದರೆ, ಯಾವುದೇ ಆದೇಶವನ್ನು ಲಿಖಿತವಾಗಿ ಮಾಡಿಲ್ಲ ಎಂದು ಹೇಳಿದರು. ಅಲ್ಲದೆ, ಹಿಜಾಬ್ ಧರಿಸುವುದು ವ್ಯಕ್ತಿಗಳ ಆಯ್ಕೆಗೆ ಬಿಟ್ಟಿದ್ದು, ಇಂದಿನಿಂದಲೂ ಹೀಗೆ ನಡೆದುಕೊಂಡು ಬಂದಿದ್ದು, ಅದು ಮುಂದುವರಿಯಲಿ ಎಂದು ಹೇಳಿದರು.
