ಉದಯವಾಹಿನಿ, ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಹೊಂದಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್ ಐ-ಕಿಮ್ಸ್) ಯಲ್ಲಿ ಶೀಘ್ರದಲ್ಲಿಯೇ ಐವಿಎಫ್(-ಪ್ರನಾಳ ಶಿಶು ಮೂಲಕ ಮಗು ಪಡೆಯುವ ಸೌಲಭ್ಯ) ಕೇಂದ್ರ ಪ್ರಾರಂಭವಾಗಲಿದೆ. ಒಬ್ಬ ಮಹಿಳೆ ಮೂರು ಸಾರಿ ಈ ಪ್ರಯತ್ನಕ್ಕೆ ಒಳಗಾಗಬಹುದು, ಇದಾದ ಬಳಿಕ ದಂಪತಿಗಳು ದತ್ತು ಪಡೆದುಕೊಳ್ಳುವ ಕುರಿತು ಯೋಚಿಸುವುದು ಒಳಿತು ಎಂದು ಡಾ.ಪ್ರಮೋದ್ ಹೇಳಿದರು.
ಮದುವೆಯಾಗಿ ವರ್ಷಗಳ ನಂತರವೂ ಹಲವು ಕಾರಣಗಳಿಂದ ಮಕ್ಕಳು ಪಡೆಯಲು ಸಾಧ್ಯವಾಗದ ನೋವು ಅನುಭವಿಸುವ ಮತ್ತು ಸಮಾಜದ ಕೊಂಕು ನುಡಿ ಕೇಳಿ, ಬೇರೆಯವರು ಮಕ್ಕಳನ್ನು ಮುದ್ದಾಡುವುದನ್ನು ನೋಡಿ ಬೇಸರಿಕೊಳ್ಳುವ ದಂಪತಿಗಳಿಗೆ ಇಲ್ಲೊಂದು ನೆಮ್ಮದಿಯ ಸುದ್ದಿ ಇದೆ. ಅದರಲ್ಲೂ ಆಧುನಿಕ ವೈದ್ಯಕೀಯ ನೆರವಿನಿಂದ ಮಗುವನ್ನು ಪಡೆಯುವ ಬಯಕೆ ಇದ್ದರೂ ಆರ್ಥಿಕ ಪರಿಸ್ಥಿತಿಯಿಂದ ಹಿಂಜರಿಯುವ ದಂಪತಿಗಳಿಗೆ ಖಂಡಿತವಾಗಿಯೂ ಇದು ಸಂತಸದ ಸುದ್ದಿ.
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಹೊಂದಿರುವ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್ ಐ-ಕಿಮ್ಸ್) ಯಲ್ಲಿ ಶೀಘ್ರದಲ್ಲಿಯೇ ಐವಿಎಫ್(-ಪ್ರನಾಳ ಶಿಶು ಮೂಲಕ ಮಗು ಪಡೆಯುವ ಸೌಲಭ್ಯ) ಕೇಂದ್ರ ಪ್ರಾರಂಭವಾಗಲಿದೆ. ಇದು ಉತ್ತರ ಕರ್ನಾಟಕದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿಯೇ ಅಂತಹ ಅತ್ಯಾಧುನಿಕ ಸೌಲಭ್ಯ ಹೊಂದುವ ಮೊದಲನೆಯ ಕೇಂದ್ರವಾಗಲಿದೆ. ಸಾಮಾನ್ಯವಾಗಿ ಐವಿಎಫ್ ಮೂಲಕ ಮಗು ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ತಗಲುತ್ತದೆ. ಸ್ತ್ರೀರೋಗ ತಜ್ಞೆ ಡಾ.ನಾಗರೇಖಾ ಹೆಬಸೂರ ಅವರ ಪ್ರಕಾರ “ಒಂದು ಸಾರಿ ಮಹಿಳೆ ಈ ಪ್ರಕಿಯೆಗೆ ಒಳಪಡಲು ಸುಮಾರು 1.50 ಲಕ್ಷದಿಂದ 2 ಲಕ್ಷದ ವರೆಗೆ ಖರ್ಚು ತಗಲುತ್ತದೆ. ಈ ಪ್ರಕಿಯೆಗೆ ಒಳಗಾದ ಮಹಿಳೆ ಪ್ರಥಮ ಪ್ರಯತ್ನದಲ್ಲಿಯೇ ಗರ್ಭಧರಿಸುವ ಸಾಧ್ಯತೆ ಕಡಿಮೆ. ಇಡೀ ಪ್ರಪಂಚದಲ್ಲಿ ನೂರು ಮಹಿಳೆಯರು ಈ ಪ್ರಕಿಯೆಗೆ ಒಳಪಟ್ಟರೆ ಕೇವಲ 25 ಮಹಿಳೆಯರು ಗರ್ಭ ಧರಿಸುತ್ತಾರೆ. ಐವಿಎಫ್ ಕೇಂದ್ರ ಕೆಎಂಸಿ-ಆರ್ಐ ನಂತಹ ಸರ್ಕಾರಿ ಸಂಸ್ಥೆಗಳಲ್ಲಿ ಸ್ಥಾಪಿತವಾದರೆ ಲಕ್ಷಾಂತರ, ಬಡ ಹಾಗೂ ಮಧ್ಯಮ ವರ್ಗದ ದಂಪತಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು. ಇದೊಂದು ಮಾನವೀಯ ಕಾರ್ಯ ಕೂಡಾ ಹೌದು” ಎಂದರು.
