ಉದಯವಾಹಿನಿ, ಬೆಂಗಳೂರು: ಪಂಚಮಸಾಲಿ ಲಿಂಗಾಯತ ಧರ್ಮಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಸಮುದಾಯದ ಮುಖಂಡರ ಭಿನ್ನಾಭಿಪ್ರಾಯಗಳು ಮತ್ತು ಬಿಜೆಪಿಯ ಬದ್ಧತೆ ಯಿಲ್ಲದ ನಿಲುವುಗಳಿಂದ ಚಳುವಳಿಗೆ ಹಿನ್ನಡೆಯಾಗಿದೆ. ಸಮುದಾಯವು 2ಡಿ ಅಥವಾ 2ಬಿ ಮೀಸಲಾತಿ ಅನುಸರಿಸಬೇಕೇ ಎಂಬುದರ ಕುರಿತು ಈಗ ಚರ್ಚೆ ನಡೆಯುತ್ತಿದೆ. ತನ್ನ ದೀರ್ಘಾವಧಿಯ ಯೋಜನೆಗಾಗಿ ಹಿಂದೂ ಸಮುದಾಯವನ್ನು ವಿಭಜನೆ ಮಾಡದಿರಲು ಬಿಜೆಪಿ ಬಯಸುತ್ತಿದೆ, ಪಕ್ಷವನ್ನು ಬೆಂಬಲಿಸುವ ಒಂದು ಸಮುದಾಯದ ಕಾರಣಕ್ಕಾಗಿ ಅದರ ಪರವಾಗಿ ಹೋರಾಟ ಮಾಡುವುದರಿಂದ ಇತರ ಹಿಂದುಳಿದ ವರ್ಗದ ಸಮುದಾಯಗಳ ಬೆಂಬಲ ಪಡೆಯವಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ ಎಂಬುದನ್ನು ಬಿಜೆಪಿ ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಇನ್ನು ಮುಂದೆ ರಾಜ್ಯ ಸರ್ಕಾರದಿಂದ 2ಎ ಮೀಸಲಾತಿಗಾಗಿ ಸಮುದಾಯವು ಬೇಡಿಕೆ ಇಡುವುದಿಲ್ಲ, ಆದರೆ 2ಡಿ ಟ್ಯಾಗ್ಗಾಗಿ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸಲಿದೆ ಎಂದು ಪಕ್ಷದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು. 2ಬಿ ಅಡಿಯಲ್ಲಿ ಅರ್ಹತೆ ಪಡೆದಿರುವ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ಮೂಲಕ ಕೋಟಾ ಮರುಹಂಚಿಕೆ ಕುರಿತು ಹಿಂದಿನ ಬಸವರಾಜ ಬೊಮಾಯಿ ಸರ್ಕಾರ ನಿರ್ಧರಿಸಿದಂತೆ ಸಮುದಾಯವು ವಿಷಯವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.
