ಉದಯವಾಹಿನಿ, ಹುಬ್ಬಳ್ಳಿ: ನಗರದಲ್ಲಿ ಬುಧವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆಯಿತು. ಕಳೆದ ಎರಡು ದಿನಗಳಿಂದ ನಗರದಲ್ಲಿ ಹೆಚ್ಚು ಸೆಕೆ ಇತ್ತು. ಸಂಜೆ ದಿಢೀರ್ ಮಳೆ ಬಂದಿದ್ದರಿಂದ ವಾಹನ ಸವಾರರು, ಸಾರ್ವಜನಿಕರು ಪರದಾಡಬೇಕಾಯಿತು. ಬೈಕ್ ಸವಾರರು, ವಿದ್ಯಾರ್ಥಿಗಳು ಅಂಗಡಿ ಬಳಿ, ಮೇಲೇತುವೆ ಕೆಳಗೆ ನಿಂತು ಆಶ್ರಯ ಪಡೆದರು. ಕೆಲವು ಕಡೆ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು.
ಮಳೆಯಿಂದಾಗಿ ಬಿಆರ್‌ಟಿಎಸ್ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.
ಮೇತುವೆ ಕಾಮಗಾರಿ ನಡೆಯುತ್ತಿರುವ ಚನ್ನಮ್ಮ ವೃತ್ತದ ಸುತ್ತಲಿನ ರಸ್ತೆಗಳು, ವಿದ್ಯಾನಗರ, ಹೊಸೂರು ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು. ಗುಡುಗು, ಸಿಡಿಲಿನಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಸಂಜೆ ಶುರುವಾದ ಮಳೆ ಸುಮಾರು 10 ನಿಮಿಷ ರಭಸವಾಗಿ ಸುರಿದು ನಂತರ ಸಾಧಾರಣವಾಗಿ ಸುರಿಯಿತು. ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಬಿಸಿಲಿನಿಂದ ಕಾದಿದ್ದ ಇಳೆಗೆ ತಂಪೆರೆಯಿತು.

Leave a Reply

Your email address will not be published. Required fields are marked *

error: Content is protected !!