ಉದಯವಾಹಿನಿ, ಚೆನ್ನೈ: 11ನೇ ಶತಮಾನದ ತಮಿಳುನಾಡಿನ ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭಾನುವಾರ (ಜು.27) ಪ್ರಧಾನಿ ಮೋದಿ ಭೇಟಿ ನೀಡಿದರು.ತಮಿಳುನಾಡಿನ ಅರಿಯಲೂರ್ (ಜಿಲ್ಲೆಯ ಐತಿಹಾಸಿಕ ಗಂಗೈಕೊಂಡ ಚೋಳಪುರಂನಲ್ಲಿರುವ ಬೃಹದೀಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅವರು, ಇಲ್ಲಿನ ಪ್ರಸಿದ್ಧ ಪಂಚೆ ಮತ್ತು ಅಂಗವಸ್ತ್ರದಲ್ಲಿ ಕಾಣಿಸಿಕೊಂಡರು. ಈ ಮೂಲಕ ಚೋಳ ರಾಜವಂಶದ ಪರಂಪರೆಗೆ ಗೌರವ ಸಲ್ಲಿಸಿದರು.ಬಳಿಕ ಜು.23ರಂದು ಪ್ರಾರಂಭವಾದ ಆದಿ ತಿರುಪತಿರೈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು. ಈ ವೇಳೆ ಮೋದಿ ಸ್ವಾಗತಕ್ಕಾಗಿ ಶೈವ ಧರ್ಮಗ್ರಂಥಗಳಲ್ಲಿ ಪಾರಂಗತ ವಿದ್ವಾಂಸರಾದ ಶಿವಾಚಾರ್ಯರು ಮತ್ತು ಓತುವಮೂರ್ತಿಗಳು ಪವಿತ್ರ ಸ್ತುತಿಗೀತೆಗಳನ್ನು ಪಠಿಸಿದರು. ಇಳಯರಾಜ ಅವರು ತಿರುವಾಸಾಗಂ ಕುರಿತು ವಿಶೇಷ ಸಂಗೀತ ಪ್ರದರ್ಶಿಸಿದರು. ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಹಣಕಾಸು ಸಚಿವ ತಂಗಮ್ ತೇನರಸು, ಹಿಂದೂ ಧಾರ್ಮಿಕ ಮತ್ತು ಚಾರ್ಟಿಯಬಲ್ ದತ್ತಿ ಸಚಿವ ಪಿ.ಕೆ. ಶೇಖರ್ ಬಾಬು, ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ಮತ್ತು ಕೇಂದ್ರ ಸಚಿವ ಎಲ್. ಮುರುಗನ್ ಭಾಗವಹಿಸಿದ್ದರು.
11ನೇ ಶತಮಾನದಲ್ಲಿ ಸ್ವತಃ ರಾಜೇಂದ್ರ ಚೋಳ (Rajendra Chola I) ನಿರ್ಮಿಸಿದ ಶಿವ ದೇವಾಲಯವು ರಾಜವಂಶದ ವಾಸ್ತುಶಿಲ್ಪ ಮತ್ತು ಮಿಲಿಟರಿ ಪರಾಕ್ರಮದ ಸಂಕೇತವಾಗಿದೆ. ಅಲ್ಲದೇ ಚೋಳರ ಕಾಲದ ಜೀವಂತ ದೇವಾಲಯಗಳೆಂದೇ ಪ್ರಸಿದ್ಧಿಯಾಗಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಇದಾಗಿದೆ.
