ಉದಯವಾಹಿನಿ, ಕೋಲಾರ: ಜಮೀನು ವಿವಾದದ ಹಿನ್ನೆಲೆಯಲ್ಲಿ ತಲ್ವಾರ್‌ನಿಂದ ತಲೆಗೆ ಹೊಡೆದು ತಮ್ಮನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಚಲಪತಿ ಅಲಿಯಾಸ್ ವೆಂಕಟಾಚಲಪತಿ (50) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲೇ ವಾಸ ಮಾಡುವ ತಮ್ಮ ಮುನಿರಾಜು (40) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ತಲ್ವಾರ್‌ನಿಂದ ಕೊಚ್ಚಿ ತಮ್ಮ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಮಾಪುರದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ.
ಅಣ್ಣ ಚಲಪತಿ ಜಮೀನಿನಲ್ಲಿ ಸರಿಯಾಗಿ ಭಾಗ ಕೊಡದ ಹಿನ್ನೆಲೆ ಹಲವು ಬಾರಿ ನ್ಯಾಯ ಪಂಚಾಯ್ತಿಗಳನ್ನು ಮಾಡಲಾಗಿದೆ. ಜೊತೆಗೆ ಜಮೀನು ವಿವಾದ ನ್ಯಾಯಾಲಯದಲ್ಲೂ ಇದ್ದು, ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ 35 ಲಕ್ಷ ಹಣ ಕೊಟ್ಟು ತೀರ್ಮಾನ ಸಹ ಮಾಡಿಕೊಂಡಿದ್ದಾನೆ. ಆದರೆ ಇಂದು ಮುಂಜಾನೆ ಕುರಿ ಶೆಡ್‌ಗೆ ತೆರಳಿದ ಅಣ್ಣನನ್ನ ಹಿಂಬಾಲಿಸಿದ ತಮ್ಮ ಮುನಿರಾಜು ಶೆಡ್‌ನಲ್ಲಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!