ಉದಯವಾಹಿನಿ, ಧಾರವಾಡ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಅವರ ಧಾರವಾಡದ ಫಾರ್ಮ್ಹೌಸ್ನಲ್ಲಿ ದರೋಡೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿ ಬಸವರಾಜ ರಾಯರೆಡ್ಡಿ ಅವರು ʻಮಮತಾʼ ಎಂಬ ಹೆಸರಿನಡಿ ಫಾರ್ಮ್ಹೌಸ್ ಹೊಂದಿದ್ದಾರೆ. ಈ ಫಾರ್ಮ್ಹೌಸ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಅನೇಕ ಬಾರಿ ಬಂದು ಹೋಗಿದ್ದಾರೆ. ಕಳೆದ ಆ.13 ರಂದು ಸುಮಾರು 8-10 ಜನರ ಗುಂಪು ಫಾರ್ಮ್ಹೌಸ್ಗೆ ನುಗ್ಗಿದೆ. ಫಾರ್ಮ್ಹೌಸ್ನಲ್ಲಿ ಮಲಗಿದ್ದ ಕಣ್ಣಪ್ಪ ಜಡ್ಲಿ, ಹನುಮಂತ ಧನದಾವರ್, ಅಶೋಕ ಪೋತಲಿ, ಲಕ್ಷ್ಮಣ ಚಂದರಗಿ ಎಂಬುವವರನ್ನ ಎಬ್ಬಿಸಿದ ದರೋಡೆಕೋರರು ಅವರಿಗೆ ಚಾಕು ತೋರಿಸಿ ಹೆದರಿಸಿದ್ದಲ್ಲದೇ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಬಾಯಿಗೆ ಗಮ್ ಟೇಪ್ ಸುತ್ತಿ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನ ದರೋಡೆ ಮಾಡಿದ್ದಾರೆ. ಅದೇ ದಿನ ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ದರೋಡೆಕೋರರ ಬಂಧನಕ್ಕೆ ಒಟ್ಟು 8 ತಂಡಗಳನ್ನು ರಚಿಸಿದ್ದರು. ಈ ತಂಡದ ಅಧಿಕಾರಿಗಳು, ಬಳ್ಳಾರಿ, ರಾಯಚೂರು, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಈ ದರೋಡೆಕೋರರ ಬಗ್ಗೆ ದಾಖಲಾದ ಮಾಹಿತಿ ಪಡೆದು ಶೋಧಕ್ಕಿಳಿದಿದ್ದರು. ಕೊನೆಗೆ ಕೊನೆಗೆ 15 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಅವರೇ ದರೋಡೆ ಮಾಡಿದ್ದು ಎಂದು ಗೊತ್ತಾಗಿದೆ.
