ಉದಯವಾಹಿನಿ, ದಾವಣಗೆರೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೊನ್ನೂರಪ್ಪ ಚಿರತೆ ದಾಳಿಗೆ ಒಳಗಾದ ರೈತ. ಜಮೀನಿನಲ್ಲಿ ಕೆಲಸದಲ್ಲಿ ನಿರತರಾಗಿದ್ದ ಹೊನ್ನೂರಪ್ಪ ಅವರ ಮೇಲೆ ಹಿಂದಿನಿಂದ ಬಂದ ಚಿರತೆ ಏಕಾಏಕಿ ದಾಲಳಿ ಮಾಡಿದೆ. ಚಿರತೆ ದಾಳಿಯಿಂದ ಹೊನ್ನೂರಪ್ಪ ಅವರ ಕಾಲಿಗೆ ಗಾಯವಾಗಿದೆ. ಕೂಡಲೇ ಅವರು ಕಿರುಚಾಡಿದ್ದು, ಪಕ್ಕದ ಜಮೀನಿನಲ್ಲಿದ್ದ ರೈತರು ಓಡಿ ಬಂದಿದ್ದಾರೆ. ಈ ವೇಳೆ ಚಿರತೆ ಅಲ್ಲಿಂದ ಪರಾರಿಯಾಗಿದೆ. ಬಳಿಕ ಗಾಯಗೊಂಡ ರೈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹೆಜ್ಜೆ ಗುರುತುಗಳನ್ನು ದೃಢಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೊಣೆಹಳ್ಳಿ, ಕಾಮಗೇತನಹಳ್ಳಿ, ಮುಸ್ಟೂರು ಭಾಗದ ಜಮೀನುಗಳಲ್ಲಿ ಚಿರತೆ ಓಡಾಡಿದ್ದ ಹೆಜ್ಜೆ ಗುರುತು ಕಂಡು ಜನರು ಆತಂಕದಲ್ಲಿದ್ದಾರೆ. ಈಗ ರೈತನ ಮೇಲೆ ದಾಳಿ ನಡೆಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
