ಉದಯವಾಹಿನಿ, ಚಿಕ್ಕಮಗಳೂರು: ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಯುವತಿಯರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ನೋಟು ಎಸೆದು ದರ್ಪ ಮೆರೆದಿರುವುದು ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.
ಸಖರಾಯಪಟ್ಟಣ ಗ್ರಾಪಂ ಸದಸ್ಯೆ ಪತಿ ಪ್ರದೀಪ್ ಎಂಬಾತ ದುಡ್ಡು ತೂರಿದ್ದಾನೆ. ಆ ದುಡ್ಡನ್ನ ಬೇರೆಯವರು ತೆಗೆದುಕೊಳ್ಳದಂತೆ ಮೂರ್ನಾಲ್ಕು ಹುಡುಗರನ್ನು ಕಾವಲಿಗೂ ನಿಲ್ಲಿಸಿಕೊಂಡಿದ್ದ. ಸಭ್ಯತೆ ಕಾರ್ಯಕ್ರಮದಲ್ಲಿ ಅಸಭ್ಯತೆ ಕಂಡು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುತುರ್ಭುಜ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮವನ್ನು ಚಿಕ್ಕಮಗಳೂರು ಶಾಸಕ ತಮ್ಮಯ್ಯ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ನೃತ್ಯ ಆರಂಭವಾಗುತ್ತಿದ್ದಂತೆ ವೇದಿಕೆ ಹತ್ತಿದ್ದ ಪಂಚಾಯಿತಿ ಸದಸ್ಯೆ ಪತಿ ಪ್ರದೀಪ್ ಯುವತಿಯರ ಮೇಲೆ 50 ರೂ. ನೋಟಿನ ಮಳೆ ಸುರಿಸಲಾರಂಭಿಸಿದ್ದ. ಈ ವರ್ತನೆಯನ್ನು ಕಣ್ಣಾರೆ ಕಂಡರೂ ಸ್ಥಳೀಯ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಹಣ ಎಸೆಯುವುದು ನಿಷೇಧವಿದ್ದರೂ ಸುಮ್ಮನಿದ್ದಿದ್ದು ಯಾಕೆ? ಶಾಸಕರ ಆಪ್ತ ಎಂದು ಸುಮ್ಮನಾದ್ರ ಪೊಲೀಸರು? ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
