ಉದಯವಾಹಿನಿ, ಬಾಲಿವುಡ್ ನಟ ಸಂಜಯ್ ದತ್ ತಮ್ಮ ಜೀವನದಲ್ಲಿ ನಡೆದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸಂಜಯ್ ದತ್ 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದರು. ಯೆರ್ವಾಡಾ ಜೈಲಿನಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿದರು. ಬಳಿಕ ಉತ್ತಮ ನಡವಳಿಕೆ ತೋರಿಸಿದ್ದಕ್ಕೆ ಅವರನ್ನು ಶಿಕ್ಷೆ ಪೂರ್ಣವಾಗುವ ಮೊದಲೇ ಬಿಡುಗಡೆ ಮಾಡಲಾಯಿತು. ಇದೀಗ ಜೈಲು ದಿನದ ಒಂದು ಘಟನೆಯನ್ನ ನೆನೆದಿದ್ದಾರೆ. ಈಗಲೂ ಬೆಚ್ಚಿಬೀಳಿಸುವ ಘಟನೆ ಅದೊಂದೇ ಎಂದಿದ್ದಾರೆ ಸಂಜಯ್ ದತ್.ಯೆರ್ವಾಡಾ ಜೈಲಿನಲ್ಲಿದ್ದಾಗ ಒಮ್ಮೆ ನಡೆದ ಘಟನೆ ನೆನೆದ ಸಂಜಯ್ ದತ್, ಹದಿನೈದು ವರ್ಷ ಶಿಕ್ಷೆಗೆ ಒಳಗಾದ ಅಪರಾಧಿಯೊಬ್ಬ ತಮ್ಮನ್ನ ಭಯಬೀಳಿಸಿದ ಸಂದರ್ಭವನ್ನ ವಿವರಿಸುತ್ತಾರೆ. ಜೈಲಿನಲ್ಲಿದ್ದಾಗ ದಟ್ಟವಾಗಿ ಬೆಳೆದಿದ್ದ ಸಂಜಯ್ ದತ್ ಅವರ ಗಡ್ಡ ಬೋಳಿಸಲು ಜೈಲಧಿಕಾರಿಗಳು ಓರ್ವ ಡಬಲ್ ಮರ್ಡರ್ ಮಾಡಿರುವ ಅಪರಾಧಿಯನ್ನ ನೇಮಿಸಿದ್ದರಂತೆ. ಆತನ ಹೆಸರು ಮಿಶ್ರಾ. ಆ ವ್ಯಕ್ತಿ ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ. ಇವರು ಆ ವ್ಯಕ್ತಿಯನ್ನು ‘ಎಷ್ಟು ದಿನ ಜೈಲಿನಲ್ಲಿರುತ್ತೀರಿ’ ಎಂದು ಆಕಸ್ಮಿಕವಾಗಿ ಕೇಳಿದರಂತೆ. ಆತ ಹದಿನೈದು ವರ್ಷಗಳು ಎಂದನಂತೆ. ಸಂಜಯ್ ದತ್ ಕುತೂಹಲದಿಂದ ಏನಕ್ಕೆ ಎಂದು ಒತ್ತಿ ಕೇಳಿದರಂತೆ. ಆತ ಡಬಲ್ ಮರ್ಡರ್ ಮಾಡಿದ್ದಕ್ಕೆ ಎಂದನಂತೆ. ಆಗ ತಮ್ಮ ರಕ್ತ ತಣ್ಣಗಾಯಿತು ಎಂದು ಹೇಳುವ ಮೂಲಕ ಜೈಲಿನ ಭಯಾನಕ ಘಟನೆ ನೆನೆದಿದ್ದಾರೆ ಸಂಜಯ್ ದತ್.
ಅಂದಹಾಗೆ ಸಂದರ್ಶನವೊಂದರಲ್ಲಿ ಸಂಜಯ್ ದತ್ ಈ ಘಟನೆ ನೆನಪು ಮಾಡಿಕೊಂಡಿದ್ದಾರೆ. `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಈ ನಟ, ಮಿತ್ರ ಸುನಿಲ್ ಶೆಟ್ಟಿ ಜೊತೆ ವೇದಿಕೆ ಹಂಚಿಕೊಂಡಿದ್ದ ವೇಳೆ ತಮ್ಮ ಜೈಲು ಜೀವನದ ಒಂದು ಭಯಾನಕ ಹಳೆಯ ಅಧ್ಯಾಯವನ್ನು ನೆನಪಿಸಿಕೊಂಡಿದ್ದಾರೆ. 1993 ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಕ್ಕೆ ಜೈಲುಶಿಕ್ಷೆ ಅನುಭವಿಸಿದ್ದರು. ಹಲವು ವರ್ಷಗಳ ನಂತರವೂ ತಮ್ಮನ್ನು ಬೆಚ್ಚಿಬೀಳಿಸಿದ ಕ್ಷಣವನ್ನು ಇದೀಗ ಸಂಜಯ್ ದತ್ ಹಂಚಿಕೊಂಡಿದ್ದಾರೆ.
