ಉದಯವಾಹಿನಿ, ಶಿವಮೊಗ್ಗ: ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ನಿರ್ವಹಣೆಗೆ ಕೊಟ್ಟು ದೊಡ್ಡ ತಪ್ಪು ಮಾಡ್ಬಿಟ್ಟೆ ಎಂದು ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗದೆ ಹುಬ್ಬಳ್ಳಿಗೆ ತೆರಳಿತ್ತು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ನಾನು ಶಿವಮೊಗ್ಗಕ್ಕೆ ಆಗಮಿಸಿದೆ. ನಮ್ಮೂರಿನಲ್ಲೇ ವಿಮಾನ ನಿಲ್ದಾಣವಿದ್ದರೂ ಇನ್ನೊಂದು ಊರಿಗೆ ಹೋಗಿ ಬರುವಂತಹ ದುಸ್ಥಿತಿ ಇದೆ ಎಂದು ಬೇಸರವಾಗುತ್ತದೆ.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಪೂರಕವಾದ ಉಪಕರಣಗಳನ್ನು ತರಿಸಿ ಮೂರು ತಿಂಗಳಾಗಿದೆ. ಇವುಗಳ ಅಳವಡಿಕೆಗೆ ಎರಡರಿಂದ ಮೂರು ಕೋಟಿ ರೂ. ಅಗತ್ಯವಿದೆ. ಟೆಂಡರ್ ಕರೆಯಲು ವಿಳಂಬವಾಗುತ್ತಿದೆ. ಇದರ ಬದಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರೆ ಟೆಂಡರ್ ರಹಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದರು. ಸರ್ಕಾರ ಒಂದು ಕೋಟಿ ರೂ. ಕೊಡಲು ಸಂಪುಟ ಸಭೆ ನಡೆಸಬೇಕು ಎನ್ನುತ್ತಿದೆ. ರಾಜ್ಯ ಸರ್ಕಾರದಿಂದ ಹಣ ಕೊಡಲೂ ವಿಳಂಬವಾಗುತ್ತಿದೆ. ಕೆಲಸ ಆರಂಭಿಸಲೂ ತಡವಾಗುತ್ತಿದೆ. ಇದರಿಂದ ನಮಗೆ ದೊರೆಯಬೇಕಿದ್ದ ಅವಕಾಶ ಬೇರೆಯವರ ಪಾಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
