ಉದಯವಾಹಿನಿ, ಶ್ರೀನಗರ: ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉಗ್ರರಿಗೆ ಸಹಾಯ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ 26 ವರ್ಷದ ಮೊಹಮ್ಮದ್ ಯೂಸುಫ್ ಕಟಾರಿ ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಟಾರಿಯನ್ನ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಜಮ್ಮು-ಕಾಶ್ಮೀರ ಪೊಲೀಸರು ಕಟಾರಿ ಬಗ್ಗೆ ಹಲವು ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಟಾರಿ, ಶಿಕ್ಷಕನಾಗಿಯೂ ಕೆಲಸ ಮಾಡ್ತಿದ್ದ. ಈತ ಪಾಕಿಸ್ತಾನದ ಲಷ್ಕರ್ ಎ ತೈಬಾ (LTE) ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದ ಅನ್ನೋದು ಗೊತ್ತಾಗಿದೆ.
ಪಹಲ್ಗಾಮ್ ಉಗ್ರರನ್ನ ಕೆಲ ದಿನಗಳ ಹಿಂದೆ ನಡೆದ ಆಪರೇಷನ್ ಮಹಾದೇವ್ (Operation Mahadev) ಕಾರ್ಯಾಚರಣೆಯಲ್ಲಿ ಚಿನಾರ್ ಕಾರ್ಪ್ಸ್ ಬೆಟಾಲಿಯನ್ ಹತ್ಯೆಗೈದಿತ್ತು. ಆ ಬಳಿಕ ಉಗ್ರರಿಗೆ ಸೇರಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೆಲ್ಲದರ ವಿಶ್ಲೇಷಣೆಯ ಬಳಿಕ ಕಟಾರಿಯನ್ನ ಬಂಧಿಸಲಾಗಿದೆ.
