ಉದಯವಾಹಿನಿ, ನವದೆಹಲಿ: ಚಳಿಗಾಲಕ್ಕೆಂದು ಪ್ರತ್ಯೇಕವಾಗಿ ಆಹಾರವನ್ನು ಸೇವಿಸಬೇಕೆಂದಿಲ್ಲ. ನಿತ್ಯದ ಆಹಾರ ಗಳೇ ಆಗಲೂ ಸಾಕಾಗುತ್ತವೆ. ಆದಾಗ್ಯೂ ಕೆಲವು ಆಹಾರಗಳನ್ನು ಸ್ವಲ್ಪ ಆದ್ಯತೆಯ ಮೇರೆಗೆ ಸೇವಿಸಿದಲ್ಲಿ ಋತುಮಾನದ ಸಮಸ್ಯೆಗಳನ್ನು ದೂರ ಮಾಡ ಬಹುದು. ಅಂದರೆ, ನಮ್ಮ ಆರೋಗ್ಯ ವನ್ನು ಕಾಪಾಡುವಂಥ ಅಭ್ಯಾಸಗಳು ಚಳಿಗಾಲವನ್ನು ಸುಲಲಿತವಾಗಿ ದಾಟಿಸಬಲ್ಲವು. ಹಾಗಾದರೆ ಚಳಿಗಾಲದಲ್ಲಿ ನಮ್ಮ ಆಹಾರ ಹೇಗಿರಬೇಕು.
ಊಟದ ತಟ್ಟೆಯಲ್ಲಿ ಹಸಿರು ಬಣ್ಣ ಸಾಕಷ್ಟಿರಲಿ:
ಅಂದರೆ ಹಸಿರು ಸೊಪ್ಪು, ಹಸಿರು ತರಕಾರಿಗಳು ಧಾರಾಳವಾಗಿರಲಿ. ಮೆಂತೆ, ಪಾಲಕ್ನಿಂದ ಹಿಡಿದು ದಂಟು, ಹೊನಗನ್ನೆಯವರೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನಿ. ಹಿಂದೆ ಹೊಲಗಳಿಂದ ಕಿತ್ತು ತರುತ್ತಿದ್ದ ಬೆರಕೆ ಸೊಪ್ಪುಗಳ ಸೇವನೆ ಈ ಮಟ್ಟಿಗೆ ಬಹಳ ಉಪಯುಕ್ತ. ಕ್ಯಾಪ್ಸಿಕಂ, ಬೆಂಡೆಕಾಯಿ ಯಿಂದು ಹಿಡಿದು, ಎಲೆಕೋಸು, ಬ್ರೊಕೊಲಿಯವರೆಗೆ ಹಸಿರು ತರಕಾರಿಗಳನ್ನು ಭರಪೂರ ಸೇವಿಸಿ. ಚಳಿಗಾಲದಲ್ಲಿ ಏರುವ ತೂಕಕ್ಕೆ ಕಡಿವಾಣ ಹಾಕುವುದರಿಂದ ಹಿಡಿದು, ಮಧುಮೇಹ ನಿಯಂತ್ರಣ, ರಕ್ತದೊತ್ತಡ ಹತೋಟಿಯವರೆಗೆ ಹಲವು ರೀತಿಯಲ್ಲಿ ಇವು ಉಪಕಾರ ಮಾಡುತ್ತವೆ.
ಹಸಿರು ತರಕಾರಿಗಳಲ್ಲಿ ಬೀಟಾ ಕ್ಯಾರೊಟಿನ್ ಎಂಬ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸಲು ಅಗತ್ಯ. ಇದಲ್ಲದೆ ಕಬ್ಬಿಣ ಮತ್ತು ಫೋಲೇಟ್ ಅಂಶಗಳು ಹೇರಳವಾಗಿವೆ. ಇವುಗಳು ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ರಕ್ತದಲ್ಲಿ ಆಮ್ಲಜನಕದ ಪೂರೈ ಕೆಗೆ ಆವಶ್ಯಕವಾದವು. ಜೊತೆಗೆ ಈ ತರಕಾರಿಗಳಲ್ಲಿರುವ ನಾರಿನಂಶ. ಹಲವು ರೀತಿಯ ರೋಗಗಳಿಂದ ನಾರು ನಮ್ಮನ್ನು ದೂರ ಇರಿಸುತ್ತದೆ.
