ಉದಯವಾಹಿನಿ, ಕೋಲ್ಕತ್ತಾ: ಬಂಗಾಳದಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ನೀವು ದಾಳಿ ಮಾಡಿ.  ಜನರ ಮೇಲೆ ಯಾವುದೇ ವೈಯಕ್ತಿಕ ದಾಳಿ ನಡೆಸಿದರೆ ನಾನು ಇಡೀ ರಾಷ್ಟ್ರವನ್ನು ನಡುಗಿಸುತ್ತೇನೆ. ಚುನಾವಣೆಯ ನಂತರ ನಾನು ಇಡೀ ಭಾರತವನ್ನು ಸುತ್ತುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಬೊಂಗಾನ್‌ನಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿ ರ‍್ಯಾಲಿ ನಡೆಸಿ ಮಾತನಾಡಿ, ಚುನಾವಣಾ ಆಯೋಗವು ಒಂದೇ ಹೆಸರನ್ನು ಅಳಿಸುವ ಅಧಿಕಾರವನ್ನು ಹೊಂದಿಲ್ಲ. ನೀವು ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಭರವಸೆ ನೀಡಿದರು. ಎಸ್‌ಐಆರ್ ನಡೆಸಲು 3 ವರ್ಷಗಳು ಬೇಕಾಗುತ್ತದೆ.
2002ರಲ್ಲಿ ಕೊನೆಯದಾಗಿ ಎಸ್‌ಐಆರ್‌ ನಡೆಸಲಾಯಿತು. ನಾವು ಎಂದಿಗೂ ಎಸ್‌ಐಆರ್ ಅನ್ನು ವಿರೋಧಿಸಲಿಲ್ಲ. ಆದರೆ ಈಗ ಬಿಜೆಪಿ ತಮ್ಮ ಪಕ್ಷದ ಕಚೇರಿಯಿಂದ ಪಟ್ಟಿಯನ್ನು ಸರಿಪಡಿಸುತ್ತಿದೆ ಮತ್ತು ಚುನಾವಣಾ ಆಯೋಗವು ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತದೆ. ಚುನಾವಣಾ ಆಯೋಗ ಬಿಜೆಪಿಯ ಆಯೋಗವಲ್ಲ ಎಂದು ಕಿಡಿಕಾರಿದರು.
ಅಂಬೇಡ್ಕರ್ ಸಾಕಷ್ಟು ಚಿಂತನೆಯ ನಂತರ ಸಂವಿಧಾನವನ್ನು ರಚಿಸಿದ್ದಾರೆ ಎಂಬುದನ್ನು ಮರೆಯಬೇಡಿ. ನಮ್ಮ ಸಂವಿಧಾನವು ಎಲ್ಲಾ ಧರ್ಮಗಳ ನಡುವೆ ಸಾಮರಸ್ಯವನ್ನು ಬಯಸುತ್ತದೆ.  ಬಿಜೆಪಿ ಜನರನ್ನು ಹಿಂಸಿಸುತ್ತಿದೆ ಮತ್ತು ಧರ್ಮದ ಹೆಸರಿನಲ್ಲಿ ಅಧರ್ಮವನ್ನು ಆಶ್ರಯಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ.  ಪ್ರತಿಯೊಬ್ಬ ಮತದಾರರು ಡಿ. 4 ರೊಳಗೆ ಭಾಗಶಃ ಮೊದಲೇ ಭರ್ತಿ ಮಾಡಿದ ವಿಶಿಷ್ಟ ಎಣಿಕೆ ನಮೂನೆಯನ್ನು ತಮ್ಮ ಬೂತ್ ಮಟ್ಟದ ಅಧಿಕಾರಿಗೆ  ಸಲ್ಲಿಸಬೇಕು. ಕರಡು ಪಟ್ಟಿ ಡಿಸೆಂಬರ್ 9ರಂದು ಚುನಾವಣಾ ಆಯೋಗ ಪ್ರಕಟಿಸಲಿದೆ.

 

Leave a Reply

Your email address will not be published. Required fields are marked *

error: Content is protected !!