ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಚಳಿ ತೀವ್ರಗೊಂಡಿದೆ. ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುತ್ತಿದೆ. ಶನಿವಾರ ನಗರದಲ್ಲಿ ತಾಪಮಾನ ಹಠಾತ್ ಕುಸಿತ ಕಂಡಿದ್ದು, ಕನಿಷ್ಟ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮನೆಯಿಂದ ಹೊರ ಬರಲು ಜನ ಚಳಿಗೆ ಅಯ್ಯೋ ಅಂತಿದ್ದಾರೆ. ಈ ತಣ್ಣನೆಯ ವಾತಾವರಣ ಇಂದು ಕೂಡ ಮುಂದುವರಿಯಲಿದೆ.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ದಿತ್ವಾ ಚಂಡಮಾರುತ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ತಂಗಾಳಿಯ ವೇಗ ಘಂಟೆಗೆ 20 ಕಿ.ಮೀ ತಲುಪುವ ಸಾಧ್ಯತೆಯಿದೆ. ಮುಂದಿನ ಎರಡ್ಮೂರು ದಿನಗಳು ನಗರದಲ್ಲಿ ಮೋಡ ಕವಿದ ವಾತವರಣ ಇರಲಿದ್ದು, ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಶೀತಗಾಳಿ ತೀವ್ರವಾಗುತ್ತಿದ್ದು, ಬೆಂಗಳೂರಿನಲ್ಲಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆಯಿದೆ. ಶನಿವಾರ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇಂದು 18 ಡಿಗ್ರಿ ಸೆಲ್ಸಿಯಸ್ ಇದ್ದು, ಮುಂದಿನ ಎರಡ್ಮೂರು ದಿನಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಬಹುದೆಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ ಶೀತಗಾಳಿ ಉತ್ತುಂಗಕ್ಕೇರುವ ನಿರೀಕ್ಷೆಯಿದ್ದು, ಮಕ್ಕಳು, ಹಿರಿಯರು, ಗರ್ಭಿಣಿಯರು ಅಗತ್ಯ ಮುನ್ನೆಚ್ಚರಿಕೆಗಳಿಂದ ಇರುವ ಅನಿವಾರ್ಯತೆಯಿದೆ. ಬೆಳ್ಳಂಬೆಳಗ್ಗೆ ವಾಕಿಂಗ್ಗೆ ಬರುವವರು ಚಳಿಗೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
