ಉದಯವಾಹಿನಿ : ಜಗತ್ತಿನ ಹಲವಾರು ದೇಶಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದ ಜನರು ತಮ್ಮ ಬ್ಯಾಂಕ್ ಖಾತೆಗಳು ಹಠಾತ್ತನೆ ಸ್ಥಗಿತಗೊಳ್ಳುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆ ಇಲ್ಲದಿದ್ದರೂ ಸಹ ಬ್ಯಾಂಕುಗಳು ಖಾತೆಗಳನ್ನು ಬಂದ್ ಮಾಡುತ್ತಿರುವುದು ಆತಂಕ ಮೂಡಿಸಿದೆ. ಈ ರೀತಿಯ ಖಾತೆ ಸ್ಥಗಿತ ಪ್ರಕ್ರಿಯೆಯನ್ನು ‘ಡಿಬ್ಯಾಂಕಿಂಗ್’ ಎಂದು ಕರೆಯಲಾಗುತ್ತದೆ. 9/11 ಭಯೋತ್ಪಾದಕ ದಾಳಿಯ ನಂತರ ಜಾರಿಗೆ ಬಂದ ಕಠಿಣ ಹಣಕಾಸು ನಿಯಮಗಳು ಇದರ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಈ ಕುರಿತು ದಿ ಗಾರ್ಡಿಯನ್ ಪತ್ರಿಕೆ ವಿಶೇಷ ವರದಿ ಪ್ರಕಟಿಸಿದೆ.ವರದಿಯ ಪ್ರಕಾರ, ಯುಕೆ, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸಾವಿರಾರು ಮುಸ್ಲಿಂ ಮತ್ತು ವಲಸೆ ಕುಟುಂಬಗಳನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಬ್ಯಾಂಕುಗಳು ಅಪಾಯ ತಪ್ಪಿಸಲು ಶಂಕಿತ ಖಾತೆಗಳನ್ನು ಮುಂಚಿತವಾಗಿಯೇ ಮುಚ್ಚುತ್ತಿವೆ. ಭಯೋತ್ಪಾದನೆಗೆ ಹಣ ಹರಿಯುವುದನ್ನು ತಡೆಯುವ ಉದ್ದೇಶದಿಂದ ಬ್ಯಾಂಕುಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿದೆ. ಅನುಮಾನಾಸ್ಪದ ವಹಿವಾಟುಗಳನ್ನು ಗಮನಿಸದಿದ್ದರೆ ಬ್ಯಾಂಕುಗಳಿಗೆ ಭಾರೀ ದಂಡ ಮತ್ತು ಕಾನೂನು ಕ್ರಮ ಎದುರಾಗುವ ಸಾಧ್ಯತೆ ಇರುವುದರಿಂದ, ಅವುಗಳು ಎಚ್ಚರಿಕೆಯ ಹೆಸರಿನಲ್ಲಿ ಖಾತೆಗಳನ್ನು ಬಂದ್ ಮಾಡುತ್ತಿವೆ.
ಕೆಲವು ಪ್ರಕರಣಗಳಲ್ಲಿ ಸಣ್ಣ ಮೊತ್ತದ ಹಣ ವರ್ಗಾವಣೆ, ಕುಟುಂಬ ಸದಸ್ಯರಿಂದ ಹಣ ಸ್ವೀಕರಿಸುವುದು, ಇಂಗ್ಲಿಷ್ ಅಲ್ಲದ ಭಾಷೆಯಲ್ಲಿ ಪಾವತಿ ವಿವರ ಬರೆಯುವುದು ಕೂಡ ಖಾತೆ ಸ್ಥಗಿತಕ್ಕೆ ಕಾರಣವಾಗುತ್ತಿದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದರೆ ಕೂಡ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ. 9/11 ನಂತರ ಸ್ಥಾಪನೆಯಾದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ದತ್ತಿ ಸಂಸ್ಥೆಗಳ ಮೂಲಕವೂ ಭಯೋತ್ಪಾದಕ ಹಣ ಹರಿಯಬಹುದು ಎಂದು ಎಚ್ಚರಿಸಿದೆ. ಇದರಿಂದಾಗಿ ಮುಸ್ಲಿಂ ದತ್ತಿ ಮತ್ತು ಪರಿಹಾರ ಸಂಸ್ಥೆಗಳ ಮೇಲೂ ಹೆಚ್ಚಿನ ನಿಗಾ ವಹಿಸಲಾಗಿದೆ. ಆದರೆ ಈ ಕ್ರಮಗಳಿಂದ ಭಯೋತ್ಪಾದನೆ ಸಂಪೂರ್ಣವಾಗಿ ನಿಲ್ಲದಿದ್ದರೂ, ಸಾಮಾನ್ಯ ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದು ಗಂಭೀರ ಚರ್ಚೆಗೆ ಕಾರಣವಾಗಿದೆ.
