ಉದಯವಾಹಿನಿ, ಭೋಪಾಲ್: ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರದ ಜಗಳಗಳು ವಿಕೋಪಕ್ಕೆ ಹೋಗುವುದು ಇದೆ. ಅದೇ ರೀತಿ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ತಡರಾತ್ರಿ ಹಿಂಸಾಚಾರದ ಘಟನೆಯೊಂದು ನಡೆದಿದೆ. ಕಾರುಗಳ ನಡುವೆ ನಡೆದ ಸಣ್ಣ ಅಪಘಾತವೊಂದು ವಿಕೋಪಕ್ಕೆ ತಿರುಗಿದೆ. ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಕಿಲೋ ಮೀಟರ್ ದೂರದವರೆಗೆ ಇಬ್ಬರು ಕಿಡಿಗೇಡಿಗಳು ಎಳೆದೊಯ್ದಿದ್ದು ದೈಹಿಕವಾಗಿ ಹಲ್ಲೆ ಕೂಡ ನಡೆಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಭಿಂದ್ ರಸ್ತೆಯ ಆದಿತ್ಯ ಹೋಟೆಲ್ ಬಳಿಯ ಮಹಾರಾಜಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಫೆಬ್ರವರಿ 1ರ ರಾತ್ರಿ 11 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ಸಂಭವಿಸಿದೆ.
ಆದಿತ್ಯಪುರಂನ ಗಣೇಶ್ ಕಾಲೋನಿಯಲ್ಲಿ ವಾಸಿಸುತ್ತಿರುವ ನಿವೃತ್ತ ಸೈನಿಕ ಕಲ್ಯಾಣ್ ಕಿಶೋರ್ ಕಾಂತ್ ಶರ್ಮಾ ತಮ್ಮ ಭಾವ ಅವಧೇಶ್ ಶರ್ಮಾ ಅವರೊಂದಿಗೆ ಊಟ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಆದಿತ್ಯ ಹೋಟೆಲ್ ಬಳಿ ಶರ್ಮಾ ಅವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿದೆ. ಕಾರು ತಗುಲಿದ ತಕ್ಷಣ ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಯುವಕರು ಇಳಿದು ಬಂದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ನಿವೃತ್ತ ಸೈನಿಕ ಮತ್ತು ಅವರ ಸೋದರ ಭಾವ ಆಕ್ಷೇಪಿಸಿದಾಗ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಆರೋಪಿಗಳು ಸಾರ್ವಜನಿಕರ ಮುಂದೆ ಇಬ್ಬರ ಮೇಲೂ ಹಲ್ಲೆ ನಡೆಸಲು ಮುಂದಾದರು.
