ಉದಯವಾಹಿನಿ, ಛತ್ತೀಸ್ಗಢ: ಛತ್ತೀಸ್ಗಢದ ಕೋಮು ಗಲಭೆ ರಾಜ್ಯದ ಗರಿಯಾಬಂದ್ ಜಿಲ್ಲೆ ವ್ಯಾಪ್ತಿಯ ಹತ್ಖೋಜ್ ಗ್ರಾಮದಲ್ಲಿ ಭಾನುವಾರ ಎರಡು ಸಮುದಾಯಗಳ ನಡುವೆ ನಡೆದ ಕೋಮು ಘರ್ಷಣೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಘಟನೆ ವೇಳೆ ಹಲವು ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಬಿಗ್ ಬಂದೋಬಸ್ತ್ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ದರೋಡೆ ಮತ್ತು ಹಲ್ಲೆ ಪ್ರಕರಣದ ವಿಡಿಯೋದಲ್ಲಿದ್ದ ಗುಂಪಿನವರೇ ಹತ್ಖೋಜ್ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಗೆ ಕಾರಣ ಎಂದು ಹೇಳಲಾಗಿದ್ದು, ಇದೇ ಆರೋಪಿಗಳು ಜಿಲ್ಲೆಯಲ್ಲಿರುವ ಶಿವ ದೇವಾಲಯದ ಧ್ವಂಸ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆಸಲಾಗಿದೆ.
ಈ ಆರೋಪಿಗಳು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಜೈಲಿನಿಂದ ಹೊರಬಂದ ಬೆನ್ನಲೇ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಬಕ್ಲಿ ಗ್ರಾಮದಲ್ಲಿ ಸ್ಥಳೀಯರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಶಸ್ತ್ರಸಜ್ಜಿತ ದಾಳಿಯಿಂದ ಗ್ರಾಮಸ್ಥರಲ್ಲಿ ಆಕ್ರೋಶ ಉಂಟಾಗಿ, ಪರಿಸ್ಥಿತಿ ಕೋಮು ಘರ್ಷಣೆಗೆ ತಿರುಗಿದೆ ಎನ್ನಲಾಗಿದೆ.
