ಉದಯವಾಹಿನಿ, ಜೈಪುರ: ಸೀಕರ್ನಲ್ಲಿ ಆಯೋಜನೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಷಣವನ್ನು ಪ್ರಧಾನಿ ಕಾರ್ಯಾಲಯ ರದ್ದುಪಡಿಸಿರುವುದಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.
‘ಈ ಕಾರ್ಯಕ್ರಮದಲ್ಲಿ ಗೆಹಲೋತ್ ಪಾಲ್ಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಅವರು ಬಂದರೆ ಸ್ವಾಗತ’ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗೆಹಲೋತ್, ‘ನಾನು ನನ್ನ ಮಾತಿನ ಮೂಲಕ ಪ್ರಧಾನಿಯನ್ನು ಸ್ವಾಗತಿಸಲು ಸಾಧ್ಯವಾಗದ ಕಾರಣ. ಟ್ವೀಟ್ ಮೂಲಕವೇ ಮೋದಿಯನ್ನು ಸ್ವಾಗತಿಸುತ್ತಿದ್ದೇನೆ’ ಎಂದಿದ್ದಾರೆ.
‘ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ… ಇಂದು ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ಮೊದಲೇ ನಿಗದಿಯಾಗಿದ್ದ ನನ್ನ ಮೂರು ನಿಮಿಷಗಳ ಭಾಷಣವನ್ನು ನಿಮ್ಮ ಕಚೇರಿ ರದ್ದುಪಡಿಸಿದೆ. ಹೀಗಾಗಿ ನನ್ನ ಮಾತಿನ ಮೂಲಕ ನಿಮ್ಮನ್ನು ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ರಾಜಸ್ಥಾನಕ್ಕೆ ನಮ್ಮ ಹೃದಯಪೂರ್ವಕ ಸ್ವಾಗತವನ್ನು ಟ್ವೀಟ್ ಮೂಲಕ ತಿಳಿಸುತ್ತಿದ್ದೇನೆ’ ಎಂದಿದ್ದಾರೆ.
