ಉದಯವಾಹಿನಿ, ಹಾರೋಹಳ್ಳಿ: ಕಳೆದ ಮೂರು ತಿಂಗಳಿಂದ ಆಗಾಗ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾನುವಾರ ಮಧ್ಯರಾತ್ರಿ ಬಿದ್ದಿದೆ.ಹಾರೋಹಳ್ಳಿ ತಾಲ್ಲೂಕಿನ ಮಾರಸಂದ್ರ, ಅಗರ, ಪಡುವನಗೆರೆ ಹಾಗೂ ದೊಡ್ಡ ಸಾದೇನಹಳ್ಳಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು.ಕುರಿ, ಮೇಕೆ, ಹಸು ಸೇರಿದಂತೆ 30ಕ್ಕೂ ಹೆಚ್ಚು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿ ತಿಂದು ಹಾಕಿತ್ತು. ಇದರಿಂದಾಗಿ ಗ್ರಾಮಸ್ಥರು ಭಯದಲ್ಲೇ ಓಡಾಡುವಂತಾಗಿತ್ತು. ಜಮೀನಿನ ಕೆಲಸ ಕಾರ್ಯಗಳಿಗೂ ಹೋಗಲು ಹಿಂದೇಟು ಹಾಕುವ ಸ್ಥಿತಿ ಬಂದಿತ್ತು.
ಅರಣ್ಯ ಇಲಾಖೆಯವರು ಕೂಡಲೇ ಚಿರತೆ ಹಿಡಿದು ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾ ಬಂದಿದ್ದರು. ಅದರಂತೆ, ಇಲಾಖೆ ಬೋನು ಇಟ್ಟಿತ್ತು. ಭಾನುವಾರ ರಾತ್ರಿ ಮಾರಸಂದ್ರ ಗ್ರಾಮದ ಕೆಂಪೇಗೌಡ ಎಂಬುವರ ಜಮೀನಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು.
ಕಾರ್ಯಾಚರಣೆಯ ನೇತೃತ್ವವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್, ವಲಯ ಅರಣ್ಯಧಿಕಾರಿ ದಾಳೇಶ್, ಉಪ ವಲಯ ಅಣ್ಯಾಧಿಕಾರಿ ರಮೇಶ್ ಯಕಚಿ ವಹಿಸಿದ್ದರು. ಶಿವಕುಮಾರ್, ಚಂದ್ರನಾಯ್ಕ, ಗಸ್ತು ಅರಣ್ಯ ಪಾಲಕ ಶಿವರಾಜ್, ಲೋಕೇಶ್, ಮಂಜುನಾಥ್, ಮಲ್ಲಿಕಾರ್ಜುನ್ ಹಾಗೂ ವಲಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
