
ಉದಯವಾಹಿನಿ, ದೇವರಹಿಪ್ಪರಗಿ:ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ’ ಎಂದು ಲಿಂಗಸಗೂರು ವಿಜಯ ಮಾಹಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ನೂತನ ಸಂತ ಸೇವಾಲಾಲ ಬಂಜಾರ ಕಮಿಟಿಯ ತಾಲೂಕು ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು,ಸಂತ ಸೇವಾಲಾಲ್ ಅವರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. 18ನೇ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಸಾರಿದ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ವಿಚಾರಧಾರೆ ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸಬೇಕು’ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂತ ಸೇವಾಲಾಲ ಬಂಜಾರ ಕಮಿಟಿಯ ಉಪಾಧ್ಯಕ್ಷರಾದ ಸುರೇಶ ಚವ್ಹಾಣ ಅವರು ಮಾತನಾಡಿ,ರಾಜ್ಯದಲ್ಲಿ ಬಂಜಾರ ಸಮುದಾಯ ಈಗಲೂ ಸಾಕಷ್ಟು ಹಿಂದುಳಿದಿದೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿಯೂ ಹಿಂದುಳಿದಿದೆ, ಸಂಘಟನೆಯ ಮೂಲಕ ಮುನ್ನೆಲೆಗೆ ತರುವ ಪ್ರಯತ್ನ ನಾವೆಲ್ಲರೂ ಸೇರಿ ಮಾಡೋಣ ಎಂದು ಸಂಘಟನೆಯ ಕುರಿತು ಮಾರ್ಮಿಕವಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಸಂತ ಸೇವಾಲಾಲ ಬಂಜಾರ ಕಮಿಟಿಯ ಅಧ್ಯಕ್ಷರಾದ ಈಶ್ವರ ಚವ್ಹಾಣ, ಕಾರ್ಯದರ್ಶಿಯಾದ ಅಶೋಕ ಪವಾರ, ಖಜಾಂಚಿಯಾದ ಕೇಶವ ರಾಠೋಡ, ಮುಖಂಡರುಗಳಾದ ದೀಪಕಶೇಟ್ ರಾಠೋಡ, ಮುದುಕಪ್ಪ ಚವ್ಹಾಣ, ಮಾಜಿ ಗ್ರಾಪಂ ಅಧ್ಯಕ್ಷರಾದ ಶ್ರೀಕಾಂತ ರಾಠೋಡ ಸೇರಿದಂತೆ ಹಲವಾರು ಸಮುದಾಯದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
