ಉದಯವಾಹಿನಿ, ಅಥಣಿ : ತಾಲೂಕಿನ ಪಾರ್ಥನಹಳ್ಳಿ, ಗುಂಡೇವಾಡಿ, ಬಳ್ಳಿಗೇರಿ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಮನಬಂದಂತೆ ಹುಚ್ಚು ನಾಯಿ ದಾಳಿ ನಡೆಸಿ ಚಿಕ್ಕ ಮಕ್ಕಳು, ಯುವಕರು, ಹಿರಿಯರು ಸೇರಿ 20 ಜನರಿಗೆ ಮತ್ತು ರೈತರು ಸಾಕಿದ ಜಾನುವಾರುಗಳಿಗೆ ಕಚ್ಚಿದ ಹುಚ್ಚು ನಾಯಿ ಅಥಣಿ ತಾಲೂಕಿನ ವಿವಿಧ ಗ್ರಾಮಗಳ ಜನರನ್ನು ನಿದ್ದೆಗೆಡಿಸಿದೆ.
ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ 12 ಜನರಿಗೆ ಹುಚ್ಚು ನಾಯಿ ಕಚ್ಚಿರುವ ವರದಿಯಾಗಿದೆ. ಅದೇ ರೀತಿ ಸಮೀಪದ ಪಾರ್ಥನಲ್ಲಿ ಗ್ರಾಮದಲ್ಲಿ ಮೂರು ಚಿಕ್ಕಮಕ್ಕಳು, 3 ಜನ ಮಹಿಳೆಯರು ಸೇರಿದಂತೆ 6 ಜನ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅಲ್ಲದೆ ರೈತರ ತೋಟದ ವಸತಿಗಳಿಗೆ ನುಗ್ಗಿದ ಹುಚ್ಚು ನಾಯಿ ಸಾಕಿದ ಜಾನುವಾರುಗಳಿಗೆ ಕಚ್ಚಿದ ವರದಿಯಾಗಿದೆ.
ತಾಲೂಕಿನ ಪ್ರಾರ್ಥನ ಹಳ್ಳಿ ಗ್ರಾಮದ 9 ವರ್ಷದ ಬಾಲಕನ ಮುಖಕ್ಕೆ ಮೈ ಭಾಗಗಳಿಗೆ ಕಚ್ಚಿದ ನಾಯಿ ಬಾಲಕ ತೀವ್ರಗಾಯವಾಗಿ ಗಾಯಗೊಂಡಿದ್ದಾನೆ. ಆತನನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಹಾರಾಷ್ಟ್ರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚುನಾಯಿಕಡಿತಕ್ಕೆ ಒಳಗಾದವರಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ “ಆಂಟಿರಾಬಿಜ್” ಚುಚ್ಚುಮದ್ದು ನೀಡಿಲಾಗಿದೆ. ಒಟ್ಟು 18 ಜನ ಚುಚ್ಚುಮದ್ದು ಪಡೆದುಕೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಒಂದು ಗ್ರಾಮದಿಂದ ಮತ್ತೊಂದು ಅಕ್ಕಪಕ್ಕದ ಗ್ರಾಮಗಳಲ್ಲಿ ಮನಬಂದಂತೆ ಜನಗಳನ್ನು, ಜಾನುವಾರಗಳನ್ನು ಹಾಗು ಬೀದಿನಾಯಿಗಳನ್ನು ಕಚ್ಚಿ ಜನರ ನಿದ್ದೆಗೆಡಿಸಿದ ಹುಚ್ಚನಾಯಿ ಸಿಗೋವರೆಗೂ ಗ್ರಾಮದ ಜನರು ಭಯದಲ್ಲೇ ಜೀವಿಸುವಂತಾಗಿದೆ.
