ಉದಯವಾಹಿನಿ, ಬೆಂಗಳೂರು: ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮನ್ನಣೆ ದೊರೆತಿರುವುದು ನಿಮಗೆಲ್ಲ ತಿಳಿದೇ ಇದೆ. ಈಗಾಗಲೇ ಕರ್ನಾಟಕದ ಈ ಸಾಂಪ್ರಾದಾಯಿಕ ಕರಕುಶಲಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ (ಜಿಐ ಟ್ಯಾಗ್) ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದೇ ಗೊಂಬೆಗಳು ಇದೀಗ ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿದೆ ಎಂದು ವರದಿಯಾಗಿದೆ.
ಸ್ನೇಹದ ಸಂಕೇತವಾಗಿ ಕೆಲವು ವರ್ಷಗಳ ಹಿಂದೆ ಚನ್ನಪಟ್ಟಣದ ಗೊಂಬೆಗಳನ್ನು ಭಾರತದ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಇದೇ ಗೊಂಬೆಗಳು ಆಫ್ಘಾನ್ ಮಕ್ಕಳ ಮುಖದಲ್ಲಿ ಮಂದಹಾಸ ಹರಿಸುತ್ತಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ರಾಮನಗರ ಜಿಲ್ಲೆಯ, ಚನ್ನಪಟ್ಟಣದ ಕಲಾವಿದರು ತಮ್ಮ ಕೈಗಳಿಂದ ತಯಾರಿಸುವ ಮರದ ಗೊಂಬೆಗಳಾಗಿವೆ. ಚನ್ನಪಟ್ಟಣದಲ್ಲಿ 250ಕ್ಕೂ ಹೆಚ್ಚು ಕಾಟೇಜ್ ಘಟಕಗಳು ಮತ್ತು ಆಟಿಕೆಗಳನ್ನು ತಯಾರಿಸುವ ಸುಮಾರು 50 ಕಾರ್ಖಾನೆಗಳಿವೆ.
ಆಫ್ಘಾನಿಸ್ತಾನದಲ್ಲಿರುವ ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಮತ್ತು ಕ್ರೈಮ್ (ಯುಎನ್ಒಡಿಸಿ) ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಆಫ್ಘಾನ್ನಲ್ಲಿ ನೂರಾರು ಮಕ್ಕಳು ಮಾದಕ ವ್ಯಸನದಿಂದ ಪ್ರಭಾವಿತರಾಗಿದ್ದಾರೆ. ಈ ಮಕ್ಕಳಿಗಾಗಿ ಬೆಂಬಲವನ್ನು ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಕೊಡುಗೆಯಾಗಿ ನೀಡಿದ ಮಕ್ಕಳ ಆಟಿಕೆಗಳು ಆಫ್ಘಾನ್ ಅನೇಕ ಮಕ್ಕಳನ್ನು ತಲುಪಿವೆ ಎಂದು ಹೇಳಿದೆ.
