ಉದಯವಾಹಿನಿ, ಕೆಂಗೇರಿ.: ನಾತುರಾಮ್ ಗೋಡ್ಸೆ ವಂಶಸ್ಥರಿಗೆ ಮಹಾತ್ಮ ಗಾಂಧೀಜಿಯವರ ಮೇಲೆ ಗೌರವವೂ ಇಲ್ಲ ಅಭಿಮಾನವೂ ಇಲ್ಲ ಎಂದು ಶಾಸಕ ಎಸ್. ಟಿ. ಸೋಮಶೇಖರ್ ಬಿಜೆಪಿ ಮುಖಂಡರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕೆಂಗೇರಿ ನಾಗರಿಕರ ಹಿತರಕ್ಷಣಾ ವೇದಿಕೆ, ವಿದ್ಯಾಪೀಠ ಗುರುಕುಲ ಆಶ್ರಮ ದ ಸಹಯೋಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿಯವರು ಕೆಂಗೇರಿಗೆ ಭೇಟಿ ನೀಡಿ ಕುಡಿಯುವ ನೀರಿನ ಬಾವಿಯನ್ನು ಉದ್ಘಾಟಿಸಿದ ೯೦ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಭಾವೈಕ್ಯತಾ ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ರಾಜಕೀಯ ಕಾರಣಕ್ಕಾಗಿ ಭಾಗವಹಿಸದೆ ಇರುವುದು ಅವರ ರೋಗ ಗ್ರಸ್ತ ಮನಸ್ಥಿತಿಗೆ ಕೈಗನ್ನಡಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿದ್ಯಾಪೀಠ ಗುರುಕಲ ಆಶ್ರಮದ ಅಕ್ಷತಾ ರವರು ಮಾತನಾಡಿ ಕಳೆದ ೯೦ ವರ್ಷಗಳಿಂದ ಮಹಾತ್ಮ ಗಾಂಧೀಜಿಯವರು ಕೆಂಗೇರಿಯಲ್ಲಿ ಉದ್ಘಾಟಿಸಿದ ಕುಡಿಯುವ ನೀರು ಬಾವಿಯನ್ನ ಸಂರಕ್ಷಿಸಿಕೊಂಡು ಬರುತ್ತಿದ್ದೇವೆ.
ನಾಗರಿಕರು ಸಹಕಾರ ನೀಡಿದರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿ ಗಾಂಧೀಜಿಯವರ ಚಿಂತನೆಗಳನ್ನ ಮುಂದಿನ ಪೀಳಿಗೆಗೂ ಕೊಂಡೊಯ್ಯಲು ದೃಢ ಸಂಕಲ್ಪ ಮಾಡಲಾಗುವುದು ಎಂದರು.
