ಉದಯವಾಹಿನಿ, ಕೆ.ಆರ್.ಪುರ: ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರು ಬಲ್ಲಿರಾ ಎನ್ನುವ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಹಾಡು ಮಾನವ ಕುಲಕ್ಕೆ ಮಹತ್ವ ಸಂದೇಶ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಹೇಳಿದರು.
ಮಹದೇವಪುರ ಕ್ಷೇತ್ರದ ವಾರಾಣಸಿ ಸರ್ಕಾರಿ ಶಾಲಾ ಪಕ್ಕದ ಮೈದಾನದಲ್ಲಿ ಆಯೋಜಿಸಿರುವ ಶ್ರೀ ದಾಸ ಶ್ರೇಷ್ಠ ಕನಕದಾಸರ ೫೩೬ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯನೂ ಭಗವಂತನನ್ನು ಕಾಣುವ ಅವಕಾಶ ಇರಬೇಕೆಂಬುದು ಕನಕದಾಸರ ಹಂಬಲ ಮತ್ತು ಎಲ್ಲರನ್ನೂ ಪ್ರೀತಿಸುವ ಕನಕದಾಸರ ತತ್ತ್ವವೇ ನಮಗೆ ಆದರ್ಶ. ಜಾತಿವ್ಯವಸ್ಥೆ ತುಂಬಿ ತುಳುಕುತ್ತಿತ್ತು, ಅದನ್ನು ಹೊಡೆದೋಡಿಸುವ ಛಲ ಇಟ್ಟುಕೊಂಡು ನಾಡಿನಾದ್ಯಂತ ಸಂಚರಿಸಿ “ಕುಲ ಕುಲ ಎಂದು ಹೊಡೆದಾಡದಿರಿ” ಎಂಬ ಸಂದೇಶ ಸಾರಿದರು ಎಂದು ಹೇಳಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಅವರು ನಾವು ಭಕ್ತ ಕನಕದಾಸ, ಸಂತ-ದಾರ್ಶನಿಕ ಬಸವಣ್ಣ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹನೀಯರ ಜಯಂತಿಯ ಉದ್ದೇಶ ಅವರು ತಮ್ಮ ಜೀವಿತಾವಧಿಯಲ್ಲಿ ಕೊಟ್ಟಂತಹ ಸಂದೇಶವನ್ನು ನಮ್ಮ ಮುಂದಿನ ಪೀಳಿಗೆಗೂ ಪಸರಿಸುವಂತೆ ಮಾಡುವುದು. ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂದಿದ್ದು, ಅದು ಈಗಿನ ಕಾಲಘಟ್ಟಕ್ಕೂ ಸೂಕ್ತವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಮುಖಂಡರಾದ ಬೈರತಿ ರಮೇಶ್, ಅನಂತರಾಮಯ್ಯ, ರಾಮಾಂಜಿನಪ್ಪ, ಪಾಪಣ್ಣ, ಗಣೇಶ್, ಶ್ರೀಧರ್ ರೆಡ್ಡಿ,ಅಭಿಷೇಕ್,ಬಿಲೇಶಿವಾಲೆಯ ಸುನೀಲ್,ರಾಮಮೂರ್ತಿ, ಇದ್ದರು.
