ಉದಯವಾಹಿನಿ, ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿ ಮಿಂಚಿನಂತೆ ಮರೆಯಾಗಿರುವ ದುಷ್ಕರ್ಮಿಯ ರೇಖಾಚಿತ್ರವನ್ನು ನಗರ ಪೊಲೀಸರು ತಯಾರಿಸಿದ್ದಾರೆ. ಕಳೆದ ಶುಕ್ರವಾರ ಮಧ್ಯಾಹ್ನ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಗೆ ಬಸ್ನಲ್ಲಿ ಬಂದು ತಿಂಡಿ ತಿಂದು ಕೈ ತೊಳೆಯುವ ಜಾಗದಲ್ಲಿ ತಾನು ತಂದಿದ್ದ ಕಪ್ಪು ಬಣ್ಣದ ಬ್ಯಾಗ್ನ್ನು ಇಟ್ಟು ಹೋಗಿರುವ ಪ್ರತಿಯೊಂದು ದೃಶ್ಯಾವಳಿಗಳು ಕೆಫೆಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆರೋಪಿಯು ಸುಮಾರು 25ರಿಂದ 30 ವರ್ಷದವನಂತೆ ಕಾಣುತ್ತಿದ್ದು, ಶರ್ಟ್, ಪ್ಯಾಂಟ್ ಧರಿಸಿ ನಂ.10 ಸಂಖ್ಯೆ ಇರುವ ಟೋಪಿ ಹಾಕಿಕೊಂಡು, ಕೂಲಿಂಗ್ ಗ್ಲಾಸ್, ಕಲರ್ ಮಾಸ್ಕ್ ಧರಿಸಿರುವುದು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಅಲ್ಲದೆ ಆತ ಬಸ್ ಇಳಿದು ಹೋಟೆಲ್ಗೆ ಅತಿವೇಗವಾಗಿ ಟೈಮ್ ನೋಡಿಕೊಂಡು ಬರುವ ದೃಶ್ಯ ಹಾಗೂ ಮರದ ಮರೆಯಲ್ಲಿ ನಿಂತು ಎಲ್ಲೆಲ್ಲಿ ಸಿಸಿಕ್ಯಾಮೆರಾಗಳಿವೆ, ಯಾವ ಗ್ರಾಹಕರು ಹೋಟೆಲ್ಗೆ ಬರುತ್ತಿದ್ದಾರೆ ಎಂಬುದನ್ನು ಸಹ ಆತ ಗಮನಿಸುತ್ತಿರವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಎಲ್ಲಾ ದೃಶ್ಯಾವಳಿಗಳನ್ನು ಆಧರಿಸಿ ನಗರ ಪೊಲೀಸರು ದುಷ್ಕರ್ಮಿಯ ರೇಖಾಚಿತ್ರವನ್ನು ತಯಾರಿಸಿ ಆತನ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
