ಉದಯವಾಹಿನಿ, ಬಳ್ಳಾರಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಏ.12 ರಂದು ನಾಮಪತ್ರ ಸಲ್ಲಿಸುವುದಾಗಿ ಇ.ತುಕರಾಂ ಅವರು ಹೇಳಿದ್ದಾರೆ.
ಅವರಿಂದು ನಗರದ ಆರಾಧ್ಯ ದೇವತೆ ದುರ್ಗಮ್ಮಗೆ ಪೂಜೆ ಸಲ್ಲಿಸಿ. ನಗರದಲ್ಲಿನ ಪಕ್ಷದ ಮುಖಂಡರ ನಿವಾಸಕ್ಕೆ ತೆರಳುವ ಮುನ್ನ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ನಾನು ನನ್ನ ಪುತ್ರಿಗೆ ಟಿಕೆಟ್ ಕೇಳಿದ್ದೆ. ಇನ್ನು ಹಲವರು ಕೇಳಿದ್ದರು. ಪಕ್ಷ ನಡೆಸಿದ ಸರ್ವೆಯಲ್ಲಿ ನನಗೆ ಟಿಕೆಟ್ ನೀಡಿದರೆ ಗೆಲುವು ಎಂಬ ಅಂಶದಿಂದ ಪಕ್ಷ ನೀಡಿದೆ. ಯಾವುದೇ ಒತ್ತಡದಿಂದ ಅಲ್ಲ. ಸಂತಸದಿಂದ ಸ್ಪರ್ಧೆ ಮಾಡುತ್ತಿರುವೆ. ಸಾಮಾನ್ಯ ಪ್ರಜೆಯಾಗಿದ್ದ ನನಗೆ ಟಿಕೆಟ್ ನೀಡಿ, ಶಾಸಕ, ಸಚಿವನಾಗಿ ಮಾಡಿತ್ತು. ಮುಂದೆ ಮತ್ತಷ್ಟು ಉತ್ತಮ ಅವಕಾಶ ದೊರೆಯಬಹುದು. ಸ್ಪರ್ಧೆಗೆ ಬೇಸರ ಎಂಬ ಮಾತೇ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ, ಬಿ.ನಾಗೇಂದ್ರ, ಜಮೀರ್ ಅಹಮ್ಮದ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಹಿರಿಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕರುಗಳಾದ ಗವಿಯಪ್ಪ, ಗಣೇಶ್, ಭರತ್ ರೆಡ್ಡಿ, ಡಾ.ಶ್ರೀನಿವಾಸ್. ಮಾಜಿ ಶಾಸಕರುಗಳಾದ ಪಿ.ಟಿ.ಪರಮೇಶ್ವರ ನಾಯ್ಕ, ಭೀಮಾನಾಯ್ಕ, ಕೆ.ಎಸ್.ಎಲ್ ಸ್ವಾಮಿ, ಜಿಲ್ಲಾ ಅಧ್ಯಕ್ಷರು, ಕಾರ್ಯಕರ್ತರು, ಮುಖಂಡರ ಸಹಕಾರದಿಂದ ಗೆಲುವೆಗೆ ಶ್ರಮಿಸುವೆ. ಮತದಾರ ಬದಲಾವಣೆ ಬಯಸಿದ್ದಾನೆ. ಈ ಹಿಂದೆ ಈ ಕ್ಷೇತ್ರದಿಂದ ಸಂಸದರಾಗಿದ್ದ ಸೋನಿಯಾಗಾಂಧಿ, ಬಸವರಾಜೇಶ್ವರಿ, ಕೋಳೂರು ಬಸವನಗೌಡ, ಕೆ.ಸಿ.ಕೊಂಡಯ್ಯ ಅವರುಕ್ಷೇತ್ರದ ಅಭಿವೃದ್ಧಿ ಮಾಡಿದ್ದನ್ನು ಸ್ಮರಿಸಬಹುದು. ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಇಲ್ಲಿ ಏನು ಅಭಿವೃದ್ಧಿ ಮಾಡಿಲ್ಲ. ಜನತೆಗೆ ನೀಡಿದ ಭರವಶೆಗಳನ್ನು ಈಡೇರಿಸಿಲ್ಲವೆಂದರು.
