ಉದಯವಾಹಿನಿ, ಹಾವೇರಿ: ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದಲ್ಲಿರುವ ಮಾಲತೇಶ ದೇವರ ದೇವಸ್ಥಾನಕ್ಕೆ ಸಂಜೆಯವರೆಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಭಕ್ತರು ದೇವರ ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ. ದೇವಸ್ಥಾನ ಬಳಿಯ ದ್ವಾರಬಾಗಿಲು ಸೇರಿರುವ ಭಕ್ತರು, ‘ನಮ್ಮನ್ನು ದೇವಸ್ಥಾನದ ಒಳಗೆ ಬಿಡಿ.
ಮಾಲತೇಶ ದೇವರ ದರ್ಶನ ಪಡೆಯುತ್ತೇವೆ. ನಂತರ, ಮೈಲಾರಕ್ಕೆ ಹೋಗಬೇಕು’ ಎಂದು ಕೋರುತ್ತಿದ್ದಾರೆ. ‘ಒಳಗೆ ಬಿಡಲು ಆಗುವುದಿಲ್ಲ’ ಎನ್ನುತ್ತಿರುವ ಪೊಲೀಸರು, ‘ಸಿದ್ದರಾಮಯ್ಯ ಅವರು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಯಾರನ್ನೂ ಬಿಡುವುದಿಲ್ಲ’ ಎಂದರು.
ಇದರಿಂದ ಸಿಟ್ಟಾದ ಭಕ್ತರು, ‘ನಮ್ಮಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬರುವುದು ಇನ್ನು ತಡವಾಗಲಿದೆ. ಅವರು ಬರುವುದಕ್ಕೂ 5 ನಿಮಿಷ ಮುನ್ನ ಬೇಕಾದರೆ ದೇವಸ್ಥಾನ ಬಂದ್ ಮಾಡಿ. ಈಗ ಒಳಗೆ ಬಿಡಿ’ ಎಂದು ಪುನಃ ಕೋರಿದರು. ಭಕ್ತರು . ಪೊಲೀಸರ ನಡುವೆ ವಾಗ್ವಾದ ನಡೆಯಿತು. ಭಕ್ತರನ್ನು ಅಕ್ರಮವಾಗಿ ತಡೆಗಟ್ಟಿರುವ ಪೊಲೀಸರು, ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಭಕ್ತರು ಹೇಳಿದರು.ನೈವೇದ್ಯ ಮಾಡಲು ಆಹಾರ ತಯಾರಿಕೆ: ದೇವರಗುಡ್ಡಕ್ಕೆ ಬಂದಿರುವ ಭಕ್ತರು, ದೇವರಿಗೆ ನೈವೈದ್ಯ ಮಾಡಲು ಆಹಾರ ಸಿದ್ದಪಡಿಸಿ, ದೇವರಿಗೆ ಅರ್ಪಿಸಲು ಕಾಯುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಒಳಗೆ ಬಿಡುತ್ತಿಲ್ಲ.
