ಉದಯವಾಹಿನಿ, ಬೆಳಗಾವಿ: ವಿಧಾನಸಭೆ ಸಮಾವೇಶಗೊಂಡಾಗ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರುಗಳೇ ಇಲ್ಲ ಎಂದುಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸಚಿವರೇ ಬಂದಿಲ್ಲ, ಹೀಗಾದರೆ ಸದನ ಹೇಗೆ ನಡೆಸುವುದು. ಹತ್ತು ನಿಮಿಷಗಳ ಕಾಲ ಸದನವನ್ನು ಮುಂದೂಡಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ಬಾಬು ಕೂಡ ಧ್ವನಿಗೂಡಿಸಿದರು. ಆಗ ಸಭಾಧ್ಯಕ್ಷ ಮಾತನಾಡಿ ಐವರು ಸಚಿವರಿದ್ದಾರೆ, ಉಳಿದವರು ಬರುತ್ತಾರೆ. ಸಕಾರಾತ್ಮಕ ಯೋಜನೆ ಮಾಡಿ, ಯಾವಾಗಲೂ ನಕಾರಾತಕ ಚಿಂತನೆ ಮಾಡಬೇಡಿ ಎಂದು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು.ಸಂತಾಪ ಸೂಚನೆಯ ನಂತರ ಆಡಳಿತ ಪಕ್ಷದ ಶಾಸಕ ಎನ್.ಎಚ್.ಕೋನರೆಡ್ಡಿ ಉತ್ತರಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.ಇದಕ್ಕೆ ಸಭಾಧ್ಯಕ್ಷರು ಉತ್ತರ ಕರ್ನಾಟಕದ ಚರ್ಚೆಗೆ ಯಾರು ಅಡ್ಡಿಪಡಿಸುತ್ತಿದ್ದಾರೆ, ಏಕೆ ತೊಂದರೆ ಸೃಷ್ಟಿ ಮಾಡುತ್ತಿದ್ದೀರಿ, ನಿಮಗೆ ಅವಕಾಶ ಕೊಟ್ಟಾಗ ಮಾತನಾಡಿ ಎಂದು ಸುಮನಾಗಿಸಿದರು. ಆಗ ಅಶೋಕ್ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಿ ಅನಂತರ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಿ ಎಂದು ಸಲಹೆ ಮಾಡಿದರು.
