ಉದಯವಾಹಿನಿ,ಬೆಂಗಳೂರು: ಅನೈತಿಕ ಪೊಲೀಸ್ ಗಿರಿಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಈ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ. ಪ್ರತಿಯೊಂದು ಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲ್ಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಸಂವಿಧಾನಬದ್ದವಾಗಿ ರಾಜ್ಯದಲ್ಲಿ ಕಾನೂನಿನ ಆಡಳಿತ ಜಾರಿಯಲ್ಲಿದೆ.ಇದು ಕುವೆಂಪು ಅವರು ಹೇಳಿದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.ಕರ್ನಾಟಕ ರಾಜ್ಯ ಹಜ್ ಸಮಿತಿ ಆಯೋಜಿಸಿದ್ದ , 2023 ನೇ ಸಾಲಿನ ಹಜ್ ವಿಮಾನ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು’ ಎನ್ನುವ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ನಮ್ಮ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಸಮಸ್ತರಿಗೆ ಅನ್ವಯ ಆಗುತ್ತದೆ. ಎಲ್ಲಾ ಧರ್ಮ, ಎಲ್ಲಾ ಜಾತಿ-ಸಮುದಾಯಗಳ ಅರ್ಹ ಫಲಾನುಭವಿಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಾರೆ.ಸಂವಿಧಾನದ ಆಶಯದಂತೆ ಸರ್ವರನ್ನೂ ಒಳಗೊಳ್ಳುವ ಸರ್ಕಾರ ನಮ್ಮದು. ನಮ್ಮ ನಾಡು ಮತ್ತು ನಮ್ಮ ದೇಶ ಸುಭಿಕ್ಷವಾಗಿ ಪ್ರಗತಿಯ ಮಾರ್ಗದಲ್ಲಿ ಸಾಗಲಿ, ನಮ್ಮ ನೆಲದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಸಲಿ ಎಂದು ಪ್ರತಿಯೊಬ್ಬ ಹಜ್ ಯಾತ್ರಿಗಳು ಪ್ರಾರ್ಥಿಸಿ ಎಂದು ನಿವೇದಿಸಿಕೊಂಡರು.
