ಉದಯವಾಹಿನಿ, ಬೆಂಗಳೂರು: ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ರ ಎರಡನೇ ಆವೃತ್ತಿಯ ಸಮಾವೇಶಕ್ಕೆ ರಾಜ್ಯವು ಪ್ರವಾಸೋದ್ಯಮ ಇಲಾಖೆಯ ಮೂಲಕ ಸಜ್ಜಾಗಿದ್ದು,ಫೆಬ್ರವರಿ ೨೬ ರಿಂದ ೨೮ ರಂದು ೩ ದಿನಗಳ ಕಾಲ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಎರಡನೇ ಆವೃತ್ತಿಯ ಕರ್ಟನ್ ರೈಸರ್, ಬ್ರೋಚರ್ ಮತ್ತು ಲಾಂಛನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದಲ್ಲದೆ, ಸಮಾಜವನ್ನು ಮೇಲೆತ್ತುವ ಮತ್ತು ಶಾಂತಿ, ಪ್ರಬುದ್ಧತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಪ್ರವಾಸೋದ್ಯಮದ ಅಗಾಧ ಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮವು ಒಂದು ಆರ್ಥಿಕ ಚಾಲಕ ಶಕ್ತಿಯಷ್ಟೇ ಆಗಿರದೇ, ಅದಕ್ಕಿಂತಲೂ ಹೆಚ್ಚಾಗಿ ಇದು ಸಾಮಾಜಿಕ ಒಳಿತಿನ ಬಲವಾಗಿದೆ, ಶಾಂತಿಯುತ ಸಹಬಾಳ್ವೆಯನ್ನು ಬೆಳಸುವ ಸಾಧನವಾಗಿದೆ ಮತ್ತು ಕಲಿಕೆ ಹಾಗೂ ಪ್ರಬುದ್ಧತೆಯ ದಾರಿಯಾಗಿದೆ. ಜಗತ್ತಿನಲ್ಲಿ ಅಡೆತಡೆಗಳು ನಮ್ಮ ನಡುವೆ ಆಗಾಗ ಭಿನ್ನಾಭಿಪ್ರಾಯ ಉಂಟು ಮಾಡುವಾಗ ಪ್ರವಾಸೋದ್ಯಮವು ತಪ್ಪು ತಿಳುವಳಿಕೆಯ ಗೋಡೆಗಳನ್ನು ಒಡೆಯುವ ಮತ್ತು ಪರಸ್ಪರ ಗೌರವ ಹಾಗೂ ಸಮಾನ ಅನುಭವ ಸೇತುಗಳನ್ನು ಸೃಜಿಸುವ ಜೊತೆಗೆ ಜನರನ್ನು ಒಟ್ಟಿಗೆ ಸೇರಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
