ಉದಯವಾಹಿನಿ, ಬೆಂಗಳೂರು: ಏರೋ ಇಂಡಿಯಾ ೨೦೨೫ರ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಆಹಾರ ಒದಗಿಸುವ ಹೊಣೆಯನ್ನು ರಾಜ್ಯ ಸರ್ಕಾರ ಇಸ್ಕಾನ್ ಸಂಸ್ಥೆಗೆ ವಹಿಸಿದೆ. ಏರ್ ಶೋ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಆಹಾರದಲ್ಲಿ ಜಿರಳೆ, ಹುಳ ಪತ್ತೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಇಂತಹ ಕ್ರಮ ಕೈಗೊಂಡಿದೆ.ಖಾಸಗಿ ಕಂಪನಿ ಗುತ್ತಿಗೆ ರದ್ದು ಏರ್ ಶೋ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನಿನ್ನೆ ನೀಡಿದ್ದ ಆಹಾರದಲ್ಲಿ ಹುಳ ಪತ್ತೆಯಾಗಿತ್ತು. ಈ ವಿಚಾರವಾಗಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಆಹಾರ ಪೂರೈಕೆಗೆ ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿದೆ.
ಆಹಾರದಲ್ಲಿ ಜಿರಳೆ, ಹುಳ:ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಪೊಲೀಸರಿಗೆ ಆಹಾರ ಒದಗಿಸುವ ಗುತ್ತಿಗೆಯನ್ನು ಎಂಬ ಖಾಸಗಿ ಕಂಪನಿಯೊಂದಕ್ಕೆ ವಹಿಸಲಾಗಿತ್ತು. ಈ ಕಂಪನಿ ಪೂರೈಸಿದ್ದ ಆಹಾರದಲ್ಲಿ ಜಿರಳೆ, ಹುಳ ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಆಡಳಿತಕ್ಕೆ ಇರಿಸುಮುರಿಸು ಆಗಿದ್ದಲ್ಲದೆ, ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕಮೀಷನರ್ ಸೂಚನೆ:ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿಜೆ ಸಜಿತ್ ಹೇಳಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಆಹಾರದಲ್ಲಿ ಜಿರಳೆ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ, ಗುಣಮಟ್ಟದ ಆಹಾರ ನೀಡಲು ಕಮಿಷನರ್ ಸೂಚನೆ ನೀಡಿದ್ದ ಬೆನ್ನಲ್ಲೇ ನಿನ್ನೆ ಊಟದ ಜತೆ ನೀಡಿದ್ದ ಸಿಹಿ ತಿನಿಸಿನಲ್ಲಿ ಹುಳ ಪತ್ತೆಯಾಗಿದ್ದರಿಂದ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದರು.
