ಉದಯವಾಹಿನಿ, ಬೆಂಗಳೂರು: ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ೧೦ ಮಂದಿ ವಿದೇಶಿಯರನ್ನು ಬಂಧಿಸಿರುವ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಹೆಣ್ಣೂರಿನಲ್ಲಿ ಸ್ಥಳೀಯ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ, ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಆತನ ವಶದಿಂದ ೮ ಲಕ್ಷ ಮೌಲ್ಯದ ನಿಷೇದಿತ ಮಾದಕ ವಸ್ತುಗಳಾದ ೫೫ ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ ಮತ್ತು ೩ ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಯಿತು. ಆರೋಪಿಯ ವಿರುದ್ಧ ಈ ಹಿಂದೆ ೨೦೨೪ ರಲ್ಲಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಎನ್.ಡಿ.ಪಿ.ಎಸ್ ರಿತ್ಯಾ ಪ್ರಕರಣ ದಾಖಲಾಗಿತ್ತು. ಚಿಕ್ಕಜಾಲದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ ಮೂವರು ವಿದೇಶಿಯರನ್ನು (ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ) ಬಂಧಿಸಿ, ಮಾನ್ಯ ಎಫ್.ಆರ್.ಆರ್.ಓ ರವರ ಮುಂದೆ ಹಾಜರುಪಡಿಸಿದ್ದು, ಅವರುಗಳನ್ನು ಫಾರಿನರ್ಸ್ ಡಿಟೆಂಷನ್ ಸೆಂಟರ್ ಗೆ ಕಳುಹಿಸಲಾಗಿದೆ.
ಅಮೃತಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ಬಂಧಿಸಿ, ಮಾನ್ಯ ಎಫ್.ಆರ್.ಆರ್.ಓ ರವರ ಮುಂದೆ ಹಾಜರುಪಡಿಸಿದ್ದು, ಅವರುಗಳನ್ನು ಫಾರಿನರ್ಸ್ ಡಿಟೆಂಷನ್ ಸೆಂಟರ್ ಗೆ ಬಿಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದರು.ವಿದ್ಯಾರಣ್ಯಪುರದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿಯರನ್ನು (ಓರ್ವ ಪುರುಷ ಮತ್ತು ಓರ್ವ ಮಹಿಳೆ) ಬಂಧಿಸಿ, ಮಾನ್ಯ ಎಫ್.ಆರ್.ಆರ್.ಓ ರವರ ಮುಂದೆ ಹಾಜರುಪಡಿಸಿದ್ದು, ಅವರುಗಳನ್ನು ಫಾರಿನರ್ಸ್ ಡಿಟೆಂಷನ್ ಸೆಂಟರ್ ಗೆ ಕಳುಹಿಸಲಾಗಿದೆ.
