ಉದಯವಾಹಿನಿ, ಬೆಂಗಳೂರು: ಮುಡಾ ಪ್ರಕರಣ ರಾಜಕೀಯ ಪ್ರೇರಿತ. ಆಸ್ತಿಗೆ ಪ್ರತಿಯಾಗಿ ಪರಿಹಾರ ಕೇಳಿದ್ದನ್ನು ಅಪರಾಧ ಎಂಬಂತೆ ಬಿಂಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಲಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಪ್ರಕರಣದಲ್ಲಿ ಬಿಜೆಪಿ ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಿದ್ದು ನಮಗೆ ಗೊತ್ತಿದೆ. ಇದರ ಹಿಂದೆ ಯಾವ ರೀತಿಯ ರಾಜಕೀಯ ಇದೆ ಎಂದು ನಮಗೆಲ್ಲಾ ಅರ್ಥವಾಗಿದೆ ಎಂದರು.
ಲೋಕಾಯುಕ್ತ ತನಿಖೆ ಮುಖ್ಯಮಂತ್ರಿ ಅಥವಾ ಇನ್ಯಾರದೋ ಅಣತಿಯಂತೆ ನಡೆದಿಲ್ಲ.
ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಚಾರಣೆಯಾಗಿದೆ. ಮೇಲಾಗಿ ಲೋಕಾಯುಕ್ತ ಚುನಾವಣಾ ಆಯೋಗದಂತೆ ಸಂಪೂರ್ಣ ಸ್ವಾಯತ್ತ ಸಂಸ್ಥೆ ಅಲ್ಲಿ ಮುಖ್ಯಮಂತ್ರಿಯವರ ಹಸ್ತಕ್ಷೇಪ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಡಾ ಪ್ರಕರಣ ಕುರಿತು ತಾವು ಆರಂಭದಲ್ಲೇ ಹೇಳಿಕೆ ನೀಡಿದ್ದು, ಇದರಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ. ಮುಖ್ಯಮಂತ್ರಿಯವರು ಸಹಿ ಮಾಡಿರುವ ಯಾವುದೇ ಕಾಗದಪತ್ರಗಳಿಲ್ಲ ಎಂದು ದಿಢೀರ್ ಬಿಜೆಪಿಯ ಪಾದಯಾತ್ರೆಯ ವೇಳೆ ನಾನು ಹೇಳಿಕೆ ನೀಡಿದ್ದೆ. ಮುಡಾ ಪ್ರಕರಣ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ. ಇದು ಹೆಚ್ಚಿನ ದಿನ ನಡೆಯುವುದಿಲ್ಲ ಎಂದು ತಿಳಿಸಿದರು.
