ಉದಯವಾಹಿನಿ,ಬೆಂಗಳೂರು: ಪ್ರತಿಯೊಬ್ಬ ಸಚಿವರೂ ತಮ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಆಡಳಿತದಲ್ಲಿ ಹಿಡಿತ ಹಾಗೂ ದಕ್ಷತೆ ಬರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ 36ನೇ ರಾಷ್ಟ್ರೀಯ ಭೂ ಮಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆಯಿದ್ದಂತೆ ರೈತರ ಜೊತೆ ನೇರ ಸಂಪರ್ಕ ಇದೆ. ಅತೀ ಹೆಚ್ಚು ಅರ್ಜಿಗಳು ಬರುವುದು ಈ ಇಲಾಖೆಗೆ. ಇಲ್ಲಿ ಪರಿಹಾರ ಸಿಕ್ಕರೆ ಅರ್ಧ ಸಮಸ್ಯೆಗಳು ಬಗೆಹರಿದಂತೆ. ಹೆಚ್ಚು ಜಗಳಗಳಾಗುವುದು ಹೆಣ್ಣು, ಹೊನ್ನು, ಮಣ್ಣಿನಿಂದ. ಹೀಗಾಗಿ ಈ ಇಲಾಖೆ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ತಾವು ತಾಲ್ಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಸೇವೆ ಆರಂಭಿಸಿ ಶಾಸಕನಾಗಿ, ಸಚಿವನಾಗಿ, ವಿರೋಧಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಇಷ್ಟು ಸುದೀರ್ಘ ಅನುಭವವಿದ್ದರೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲಾಗಲಿಲ್ಲವಲ್ಲ ಎಂಬ ಕೊರಗು ತಮನ್ನು ಕಾಡುತ್ತಿದೆ ಎಂದು ಹೇಳಿದರು.
