ಉದಯವಾಹಿನಿ, ಶ್ರವಣಬೆಳಗೊಳ: ಹೋಬಳಿಯ ಬೆಕ್ಕ ಗ್ರಾಮದಲ್ಲಿರುವ ತೀರ್ಥಂಕರರ ಪ್ರಕೃತಿಯ ವನಕ್ಕೆ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಪ್ರಕೃತಿ ಮತ್ತು ಪರಿಸರ ನಿರ್ವಹಣೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕ ಬೆಕ್ಕದ ಬಿ.ರಾಘವೇಂದ್ರ
ಅವರು ಸ್ವಾಮೀಜಿಯನ್ನು ಸ್ವಾಗತಿಸಿ, ’20 ಎಕರೆಯ ತೆಂಗಿನ ತೋಟದಲ್ಲಿ ರಾಸಾಯನಿಕ ಬಳಸದೇ ಸಾವಯವ ಕೃಷಿಯನ್ನು ಮಾತ್ರ ಅವಲಂಬಿಸಿದೆ. ಇಲ್ಲಿ ಅನೇಕ ತರಹದ ಅಮೂಲ್ಯವಾದ ಆಯುರ್ವೇದ ಸಸ್ಯಗಳನ್ನು ಬೆಳಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಇಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಲಾಗುತ್ತದೆ, ಹಾಗಾಗಿ ಇಲ್ಲಿಯ ಪರಿಸರ ತಂಪಾಗಿದ್ದು, ತೆಂಗು, ಬಾಳೆ, ವಿವಿಧ ಜಾತಿಯ ಹಣ್ಣುಗಳ ಮತ್ತು ಔಷಧಿ ಸಸ್ಯಗಳನ್ನು ನಡೆಸಲಾಗಿದೆ. ಪ್ರಾಣಿ ಸಂಕುಲಕ್ಕೆ ಕುಡಿಯುವ ನೀರಿಗೆ ಇಲ್ಲಿ ಬಿಟ್ಟಿರುವ ಹಣ್ಣುಗಳನ್ನು ಮಾರದೇ ಪ್ರಾಣಿಗಳಿಗೇ ಬಿಡಲಾಗಿದೆ ಎಂದರು. ಸ್ವಾಮೀಜಿಯು ತೀರ್ಥಂಕರರ ವನದಲ್ಲಿ ಸಂಪಿಗೆ ಸಸ್ಯಗಳನ್ನು ನಡೆಸಿದರು. ಜೈನ ಧರ್ಮದ 24 ತೀರ್ಥಂಕರರ ಹೆಸರಿನಲ್ಲಿರುವ ಸಸ್ಯಗಳನ್ನು ಸಂಗ್ರಹಿಸಿ ಬೆಳೆಸಿರುವುದನ್ನು ಶ್ಲಾಘಿಸಿದರು.
ಸಾಕಮ್ಮ ಬಸವೇಗೌಡ ಸೇವಾ ಸಂಜೀವಿನಿ ಟ್ರಸ್ಟ್ ವತಿಯಿಂದ ಸ್ವಾಮೀಜಿಯನ್ನು ಗೌರವಿಸಲಾಯಿತು.
