ಉದಯವಾಹಿನಿ, ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಸಂಘರ್ಷ ಮುಂದುವರಿಯುತ್ತಿದೆ. ಭಾರತ ಮನಸು ಮಾಡಿದರೆ ಪಾಕಿಸ್ತಾನವನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಬಹುದು ಎನ್ನುವ ಮಾತುಗಳು ಕೇವಲ ಮಾತಿಗಷ್ಟೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಉಗ್ರ ರಾಷ್ಟ್ರವನ್ನು ಮಣಿಸುವುದು ಸುಲಭದ ಮಾತಲ್ಲ. ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಸ್ವಾಮಿನಾಥನ್ ಅಯ್ಯರ್ ಪ್ರಕಾರ, ಪಾಕಿಸ್ತಾನವನ್ನು ಸೋಲಿಸಲು ಭಾರತಕ್ಕೆ ಕಷ್ಟದ ಸಂಗತಿ. ಅಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಕೊನೆಗಾಣಿಸಲು ಮಿಲಿಟರಿ ಮೂಲಕ ಸಾಧ್ಯವಿಲ್ಲ, ರಾಜಕೀಯ ನಿರ್ಣಯದಿಂದ ಪರಿಹಾರ ಸಾಧ್ಯ ಎನ್ನುತ್ತಾರೆ.
ಪಾಕಿಸ್ತಾನಕ್ಕೆ ಸಾಲ ನೀಡುವ ಸಂಬಂಧ ಇವತ್ತು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಮೀಟಿಂಗ್ ಇದೆ. ಭಾರತವೂ ವೋಟಿಂಗ್ನಲ್ಲಿ ಪಾಲ್ಗೊಳ್ಳಲಿದೆ. ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ ಎಂದು ಐಎಂಎಫ್ಗೆ ಭಾರತ ಮನವಿ ಮಾಡಿದೆ. ಆದರೆ, ಸ್ವಾಮಿನಾಥನ್ ಅಯ್ಯರ್ ಪ್ರಕಾರ, ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಸಿಗುವಂತೆ ತಡೆಯಲು ಭಾರತಕ್ಕೆ ಆಗದೇ ಹೋಗಬಹುದು. ಯಾಕೆಂದರೆ, ಐಎಂಎಫ್ನ ಬೋರ್ಡ್ಗೆ ಒಂದು ನಿರ್ಣಯ ಹೋಗಿದೆ ಎಂದರೆ ಅದಕ್ಕೆ ಸಹಮತ ಇದ್ದೇ ಹೋಗಿರುತ್ತದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ನೆರವು ನೀಡಲು ಚೀನಾ ಇದ್ದೇ ಇದೆ ಎನ್ನುತ್ತಾರೆ ಸ್ವಾಮಿನಾಥನ್ ಅಯ್ಯರ್.
