ಉದಯವಾಹಿನಿ,ಮಹಾರಾಷ್ಟ್ರ: ವಲಸೆ ಕಾರ್ಮಿಕರ ಮೇಲೆ ಇಂದಿಗೂ ದಬ್ಬಾಳಿಕೆ ನಡೆಯುತ್ತಲೇ ಇದೆ. ಜನರನ್ನು ದನಗಳಂತೆ ದುಡಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಗುತ್ತಿಗೆದಾರರಾದ ಸಂತೋಷ್ ಜಾಧವ್ ಮತ್ತು ಕೃಷ್ಣ ಶಿಂಧೆ ಅವರು, ಮಹಾರಾಷ್ಟ್ರದ ಒಸ್ಮಾನಾಬಾದ್ನಲ್ಲಿ ಬಾವಿ ತೋಡಲು ಕಾರ್ಮಿಕರನ್ನು ಕರೆತಂದು ಅವರೊಂದಿಗೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮೂರು ತಿಂಗಳಿನಿಂದ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರ ಕೆಲಸಕ್ಕೆ ಯಾವುದೇ ಹಣವನ್ನು ನೀಡಲಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ನೀಡಿ ದುಪ್ಪಟ್ಟು ಕೆಲಸ ಮಾಡಿಸಿಕೊಂಡಿದ್ದಾರೆ. ವಲಸೆ ಕಾರ್ಮಿಕರು ತಪ್ಪಿಸಿಕೊಳ್ಳದಂತೆ ಸರಪಳಿಯಿಂದ ಬಂಧಿಸಲಾಗಿತ್ತು.
ಇಂತಹ ನಿರ್ಬಂಧಗಳ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದೆ, ಕೂಲಿಕಾರರು ರಾತ್ರಿಯಲ್ಲಿ ತಪ್ಪಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ನಿದ್ದೆಯಿಲ್ಲದೆ, ಹೊಟ್ಟೆ ತುಂಬ ಊಟವಿಲ್ಲದೇ ಸುಸ್ತಾಗಿ ಕೆಲವರು ಧೈರ್ಯ ಮಾಡಿ ಒಂದು ದಿನ ತಪ್ಪಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಅದನ್ನು ಕೇಳಿ ಪೊಲೀಸರು ಬಾವಿ ತೋಡುವ ಜಾಗಕ್ಕೆ ತೆರಳಿ 11 ಕಾರ್ಮಿಕರನ್ನು ಬಿಡುಗಡೆಗೊಳಿಸಿದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂಬಂಧ ಪೊಲೀಸರು ಇದುವರೆಗೆ ಇದಕ್ಕೆ ಕಾರಣರಾದ ಇಬ್ಬರು ಗುತ್ತಿಗೆದಾರರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
