ಉದಯವಾಹಿನಿ, ಬಳ್ಳಾರಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ ನಡೆದಿದೆ. ರಾವಿಹಾಳ್ ಗ್ರಾಮದ ವಿರೇಶ್ ಎನ್ನುವವರ ಪುತ್ರ ಸಿರಿ (4) ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಬಾಲಕ.ಬಾಲಕ ಸಿರಿ ಆಟವಾಡಲು ಹೋಗಿ ಬಾವಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬಾಲಕ ಕಾಣೆಯಾದಾಗ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಗ್ರಾಮಸ್ಥರು ಬಾವಿಯಲ್ಲಿ ಶವ ತೇಲುವುದನ್ನು ಗಮನಿಸಿದ್ದರು. ಬಳಿಕ ಶವ ಹೊರತೆಗೆದಾಗ ಬಾಲಕ ಸಿರಿ ಎನ್ನೋದು ಗೊತ್ತಾಗಿದೆ. ಸದ್ಯ ಬಾಲಕನ ಶವ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾವಿಗೆ ಎತ್ತರದ ತಡೆಗೋಡೆಗಳು ಇಲ್ಲದಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಹಲವು ಬಾರಿ ಬಾವಿ ಸುತ್ತ ಎತ್ತರದ ಗೋಡೆ ಕಟ್ಟಿಸುವಂತೆ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
