ಉದಯವಾಹಿನಿ, ರಾಮನಗರ: ಸಾರಿಗೆ ನೌಕರರ ಬೇಡಿಕೆ ಈಡೇರಿಸಿ ಅವರ ಸಮಸ್ಯೆ ಬಗೆಹರಿಸಿ, ಇಲ್ಲದಿದ್ರೆ ಕರ್ನಾಟಕ ಬಂದ್ಗೆ ಕರೆ ನೀಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ ಅವರು, ಇದು ಸಾರಿಗೆ ನೌಕರರ ಬಹಳ ವರ್ಷದ ಬೇಡಿಕೆಯಾಗಿದೆ. ಅವರ ಬೇಡಿಕೆ ಸರಿಯಾಗಿದೆ. ಯಾವ ಸರ್ಕಾರವೂ ಅವರ ಸಮಸ್ಯೆಯನ್ನು ಆಲಿಸಿಲ್ಲ. ಹೀಗಾಗಿ ಅವರ ಹಳೆಯ ಸಂಬಳವನ್ನ ಕೊಟ್ಟುಬಿಡಿ. ಅವರ 36 ತಿಂಗಳ ಸಂಬಳ ಯಾಕೆ ಬಾಕಿ ಇಟ್ಟಿಕೊಂಡಿದ್ದೀರಿ…? ಬಾಕಿ ಇಟ್ಕೊಂಡ್ರೆ ನೌಕರರ ಜೀವನ ಹೇಗೆ ನಡೆಯಬೇಕು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಅವರು ಕೂಡಲೇ ಅವರ ಬೇಡಿಕೆ ಈಡೇರಿಸಬೇಕು. ಸಾರಿಗೆ ನೌಕರರ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ರಾಜ್ಯ ಸರ್ಕಾರ ಕೂಡಲೇ ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದಲ್ಲಿ ಅವರ ಜೊತೆ ಸೇರಿ ನಾವು ಹೋರಾಟ ಮಾಡ್ತೀವಿ. ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
