ಉದಯವಾಹಿನಿ, ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ಆಲ್ದರ್ತಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿದು ಅಂಗನವಾಡಿ ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂಗನವಾಡಿ ಶಿಕ್ಷಕಿ ಮೇಲೆಯೇ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದ್ದು, ಅಂಗನವಾಡಿ ಶಿಕ್ಷಕಿ ಮಹಾದೇವಮ್ಮಗೆ ಗಂಭೀರ ಗಾಯಗಳಾಗಿವೆ. ತಲೆ, ಕೈ, ಬೆನ್ನಿಗೆ ತೀವ್ರ ಪೆಟ್ಟುಗಳಾಗಿ ಶಿಕ್ಷಕಿ ಕುಸಿದು ಬಿದ್ದಿದ್ದಾರೆ. ಛಾವಣಿ ಮೇಲ್ಪದರ ಬಿದ್ದ ರಭಸಕ್ಕೆ ಶಿಕ್ಷಕಿ ಕುಳಿತಿದ್ದ ಕುರ್ಚಿ ಮುರಿದುಹೋಗಿದೆ.
ಕೂಡಲೇ ಸಹಾಯಕ್ಕೆ ಬಂದ ಗ್ರಾಮಸ್ಥರು ಗಾಯಗೊಂಡ ಶಿಕ್ಷಕಿಯನ್ನ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಗನವಾಡಿ ಶಾಲೆಯಲ್ಲಿದ್ದ 20ಕ್ಕೂ ಹೆಚ್ಚು ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ನಿರ್ಮಾಣವಾಗಿ 10 ವರ್ಷದಲ್ಲೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
