ಉದಯವಾಹಿನಿ, ಮುಂಬೈ: ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಹೋಗಿ ಆಮೇಲೆ ಕೋರ್ಟ್, ಕಚೇರಿ ಅಂತಾ ಅಲೆಯೋದು ಯಾರೆಂದು ಈಗಿನ ಜನರು ಹಿಂದೆ ಸರಿಯೋದೇ ಹೆಚ್ಚು. ಇಂತಹದೊಂದು ಘಟನೆ ನಾಗ್ಪುರದಲ್ಲಿ ನಡೆದಿದ್ದು, ಟ್ರಕ್ ಡಿಕ್ಕಿಯಾಗಿ ಮೃತಪಟ್ಟಿದ್ದ ಪತ್ನಿಯ ಸಹಾಯಕ್ಕಾಗಿ ಪತಿ ಅಂಗಲಾಚಿ, ಕೊನೆಗೆ ಆಕೆಯ ಮೃತದೇಹವನ್ನು ಬೈಕ್ನಲ್ಲಿ ಸಾಗಿಸಿದ್ದಾರೆ.
ಹೌದು, ಆಗಸ್ಟ್ 9 ರಂದು ಮಧ್ಯಪ್ರದೇಶ ಮೂಲದವರು ಅಮಿತ್ ಯಾದವ್ ಹಾಗೂ ಗ್ಯಾರ್ಸಿ ಅಮಿತ್ ಯಾದವ್ ದಂಪತಿ ನಾಗ್ಪುರದ ಲೋನಾರಾದಿಂದ ಮಧ್ಯಪ್ರದೇಶದ ಕರಣ್ಪುರಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ನಾಗ್ಪುರ – ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಟ್ರಕ್ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಗ್ಯಾರ್ಸಿ ಅಮಿತ್ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಪತ್ನಿಯ ಮೃತದೇಹವನ್ನು ಮೇಲೆತ್ತಲು ಸಹಾಯ ಮಾಡುವಂತೆ ಅಲ್ಲಿದ್ದ ಸಾರ್ವಜನಿಕರಲ್ಲಿ ಪತಿ ಅಮಿತ್ ಯಾದವ್ ಕೇಳಿಕೊಂಡಿದ್ದರು. ಆದರೆ ಯಾರು ಸಹಾಯಕ್ಕೆ ಬಾರದ ಹಿನ್ನೆಲೆ ತಾನೇ ಪತ್ನಿಯ ಮೃತದೇಹವನ್ನು ಬೈಕ್ಗೆ ಕಟ್ಟಿ ಮಧ್ಯಪ್ರದೇಶಕ್ಕೆ ಕೊಂಡೊಯ್ಯತ್ತಿದ್ದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
